ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಪ್ರಗತಿಯು (ಜಿಡಿಪಿ) ಮೂರು ವರ್ಷಗಳ ಕನಿಷ್ಠ ಮಟ್ಟವಾದ ಶೇಕಡ 5.7ಕ್ಕೆ ಕುಸಿತ ಕಂಡಿರುವುದರಿಂದ ಆರ್ಬಿಐ ಬುಧವಾರ ಬಡ್ಡಿದರ ಇಳಿಕೆ ಮಾಡುವ ನಿರೀಕ್ಷೆ ಹೆಚ್ಚಾಗಿದೆ. ಹೀಗಾಗಿ ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ಉತ್ತಮ ವಹಿವಾಟು ನಡೆದಿದೆ.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ಇ) 214 ಅಂಶ ಏರಿಕೆ ಕಂಡು 31,497 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 70 ಅಂಶ ಹೆಚ್ಚಾಗಿ 9,859 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.
ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರ ನೇತೃತ್ವದಲ್ಲಿ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಎರಡು ದಿನಗಳ ಸಭೆ ಮಂಗಳವಾರ ಆರಂಭವಾಗಿದೆ. ಜಿಡಿಪಿ ತಗ್ಗಿರುವುದರಿಂದ ಬಡ್ಡಿದರ ಕಡಿ ಮಾಡುವಂತೆ ಸರ್ಕಾರ ಮತ್ತು ಉದ್ಯಮ ವಲಯ ಒತ್ತಾಯ ಪಡಿಸಿವೆ. ಶೇಕಡ 1 ರಷ್ಟು ಬಡ್ಡಿದರ ಇಳಿಕೆ ಮಾಡುವಂತೆ ಸಿಐಐ ಒತ್ತಾಯಿಸಿದೆ.
ಈ ಮಧ್ಯೆ, ದೇಶಿ ಸಾಂಸ್ಥಿಕ ಹೂಡಿಕೆದಾರರ ಸಕ್ರಿಯ ಭಾಗವಹಿಸುವಿಕೆಯಿಂದ ಸೂಚ್ಯಂಕಗಳು ಏರಿಕೆ ಕಂಡಿವೆ ಎಂದು ತಜ್ಞರು ಹೇಳಿದ್ದಾರೆ.