ಬೆಂಗಳೂರು: ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ‘ಶ್ರೀ ಮಹರ್ಷಿ ವಾಲ್ಮೀಕಿ’ ಪ್ರಶಸ್ತಿಗೆ ಮಾಜಿ ಸಚಿವ ತಿಪ್ಪೇಸ್ವಾಮಿ ಭಾಜನರಾಗಿದ್ದಾರೆ.
ಮಾಧ್ಯಮ ಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ‘ಪ್ರಶಸ್ತಿಯು ₹ 5 ಲಕ್ಷ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ವಾಲ್ಮೀಕಿ ಜಯಂತಿ ದಿನವಾದ ಗುರುವಾರ (ಅ.5) ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡುವರು’ ಎಂದರು.
‘ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ‘ಶ್ರೀ ವಾಲ್ಮೀಕಿ ಗುರುಪೀಠ’ ಸ್ಥಾಪಿಸಲು ಶ್ರಮಿಸಿದ್ದರು. ನಾಯಕ, ವಾಲ್ಮೀಕಿ, ಬೇಡ ಮತ್ತು ಇತರ ಪರ್ಯಾಯ ಪದ ಹೊಂದಿರುವ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ) ಸೇರಿಸಲು ಶ್ರಮಿಸಿದ್ದಾರೆ’ ಎಂದೂ ವಿವರಿಸಿದರು.
‘ಪ್ರಶಸ್ತಿಗಾಗಿ 26 ಅರ್ಜಿಗಳು ಬಂದಿದ್ದವು. ಅರ್ಜಿ ಸಲ್ಲಿಸದ ತಿಪ್ಪೇಸ್ವಾಮಿ ಅವರನ್ನು ಆಯ್ಕೆ ಮಾಡಿದೆ’ ಎಂದು ಆಯ್ಕೆ ಸಮಿತಿ ಅಧ್ಯಕ್ಷೆ ಪ್ರೊ. ಸುಕನ್ಯಾ ತಿಳಿಸಿದರು.