ಬೆಂಗಳೂರು: ‘ರಾಜ್ಯದ ಎಲ್ಲ ಅಂಚೆ ಕಚೇರಿಗಳಲ್ಲಿ ಡಿಸೆಂಬರ್ ಅಂತ್ಯದೊಳಗೆ ಆಧಾರ್ ಕಾರ್ಡ್ ನೋಂದಣಿ ಕೇಂದ್ರಗಳನ್ನು ಸ್ಥಾಪಿಸುತ್ತೇವೆ’ ಎಂದು ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಾ. ಚಾರ್ಲ್ಸ್ ಲೋಬೊ ಹೇಳಿದರು.
ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ವಿಶ್ವ ಅಂಚೆ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.
‘ಅಂಚೆ ಕಚೇರಿಗಳನ್ನು ಡಿಜಿಟಲೀಕರಣ ಮಾಡುತ್ತಿದ್ದೇವೆ. ಇದರಿಂದ ಹೆಚ್ಚಿನ ಜನರಿಗೆ ತ್ವರಿತವಾಗಿ ಸೇವೆ ನೀಡಬಹುದಾಗಿದೆ’ ಎಂದರು.
ಅಬಕಾರಿ ಸುಂಕ (ಬೆಂಗಳೂರು ವಲಯ) ಮುಖ್ಯ ಆಯುಕ್ತ ರಾಜೀವ್ ಭೂಷಣ್ ತಿವಾರಿ, ‘ಅಂಚೆ ಇಲಾಖೆ ಮಾತ್ರ ಬಡವ ಮತ್ತು ಶ್ರೀಮಂತರಿಗೆ ಭೇದಭಾವ ಮಾಡದೆ ಸೇವೆ ನೀಡುತ್ತಿದೆ. ದೇಶದ ಪ್ರತಿಹಳ್ಳಿಗೆ ಅಂಚೆಸೇವೆ ತಲುಪಲು ಪೋಸ್ಟ್ಮ್ಯಾನ್ಗಳು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಶ್ಲಾಘಿಸಿದರು.
ಸ್ವಚ್ಛತೆ, ಉತ್ತಮ ಕಾರ್ಯನಿರ್ವಹಣೆ, ವ್ಯವಹಾರ ಅಭಿವೃದ್ಧಿ, ಆದಾಯ ಗಳಿಕೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯದ ವಿವಿಧ ಅಂಚೆ ವಿಭಾಗಗಳಿಗೆ ಹಾಗೂ ಅಧಿಕಾರಿಗಳಿಗೆ ಉತ್ತಮ ಸೇವಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.