ಭಾಲ್ಕಿ: ‘ಒಂದು ದೇಶದ ನೈಜ ಸಂಪತ್ತು ಆ ರಾಷ್ಟ್ರ ಹೊಂದಿರುವ ಯುವಶಕ್ತಿಯ ಮೇಲೆ ಅಳೆಯಲಾಗುತ್ತದೆ’ ಎಂದು ಖಡಕೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಸುಧಾಕರ ದೇಶಪಾಂಡೆ ನುಡಿದರು.
ಪಟ್ಟಣದ ಭಾಲ್ಕೇಶ್ವರ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳ ಕಾರ್ಯಾಗಾರದಲ್ಲಿ ಮಾತನಾಡಿದರು.
‘ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ದೇಶಭಕ್ತಿ ಬೆಳೆಸಿಕೊಂಡು ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಹೋರಾಡಬೇಕು’ ಎಂದು ಕಿವಿಮಾತು ಹೇಳಿದರು.
ಎಬಿವಿಪಿ ಕಲಬುರ್ಗಿ ವಿಭಾಗೀಯ ಸಂಚಾಲಕ ರೇವಣಸಿದ್ದ ಜಾಡರ್ ಮಾತನಾಡಿ, ‘ಸಮಾಜದಲ್ಲಿ ತಾಂಡವಾಡುತ್ತಿರುವ ಬಡತನ, ನಿರುದ್ಯೋಗ, ಭ್ರಷ್ಟಾಚಾರ ಸೇರಿದಂತೆ ಇತರ ಸಮಸ್ಯೆಗಳನ್ನು ಕೊನೆಗಾಣಿಸಲು ಯುವ ಸಮುದಾಯ ಶ್ರಮಿಸಬೇಕು. ಸ್ವಾಮಿ ವಿವೇಕಾನಂದ, ಭಗತಸಿಂಗ್ರನ್ನು ಆದರ್ಶವಾಗಿರಿಸಿಕೊಂಡು ಬಾಳಬೇಕು’ ಎಂದು ಸಲಹೆ ನೀಡಿದರು.
ಎಬಿವಿಪಿ ಕಲಬುರ್ಗಿ ವಿಭಾಗೀಯ ಸಹ ಸಂಘಟನಾ ಕಾರ್ಯದರ್ಶಿ ತೇಜಸ್ವಿ, ಜಿಲ್ಲಾ ಸಂಚಾಲಕ ಈಶ್ವರ ರುಮ್ಮಾ ಮಾತನಾಡಿದರು.
ಸಂತೋಷ ಪಾಂಚಾಳ, ರಾಜಮೋಹನರೆಡ್ಡಿ, ವಿಶಾಲ ಘಾಳೆ, ಕಿರಣ ಕಾಂಬಳೆ, ಪವನ ಸಿಂಧೆ ಇದ್ದರು.