ಕಳಸ: ಕಳೆದ ತಿಂಗಳು ಯೂರೋಪ್ ಪ್ರವಾಸದಲ್ಲಿದ್ದಾಗ ಆನ್ಲೈನ್ ಚೋರರಿಂದ ₹20 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಜಿ.ಭೀಮೇಶ್ವರ ಜೋಷಿ ಅವರಿಗೆ ಆ ಹಣ ಮರಳಿ ಬಂದಿದೆ.
ಜೋಷಿ ಅವರ ಡೆಬಿಟ್ ಕಾರ್ಡ್ ಹ್ಯಾಕ್ ಮಾಡಿದ್ದ ಚೋರರು ₹20ಲಕ್ಷಕ್ಕೂ ಹೆಚ್ಚು ಹಣ ಲಪಟಾಯಿಸಿದ್ದರು. ಈ ಬಗ್ಗೆ ಜೋಷಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಪ್ರಗತಿಯಲ್ಲಿ ಇರುವಾಗಲೇ ಕರ್ಣಾಟಕ ಬ್ಯಾಂಕ್ ಜೋಷಿ ಕಳೆದಕೊಂಡಿದ್ದ ₹20.89 ಲಕ್ಷವನ್ನು ಜೋಷಿ ಅವರ ಖಾತೆಗೆ ಜಮಾ ಮಾಡಿದೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಭೀಮೇಶ್ವರ ಜೋಷಿ, ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್.ಅವರನ್ನು ಅಭಿನಂದಿಸಿದ್ದಾರೆ. ಬ್ಯಾಂಕ್ ವ್ಯವಹಾರ ಶ್ರೇಷ್ಠತೆಯ ಜತೆಗೆ ಮಾನವೀಯ ಸಂಬಂಧಗಳ ಮೌಲ್ಯ ಕಾಪಾಡುವಲ್ಲಿ ಬದ್ಧತೆ ತೋರಿದೆ ಎಂದು ಅವರು ತಿಳಿಸಿದ್ದಾರೆ.