ರಾಯಚೂರು: ತಂತ್ರಜ್ಞಾನ ಆಧಾರಿತ ಕಲಿಕೆ ಪರಿಣಾಮಕಾರಿ ಇರುತ್ತದೆ ಎಂದು ಯರಮರಸ್ ಡಯಟ್ (ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ) ಪ್ರಾಂಶುಪಾಲ ಎಚ್.ಎಂ.ಮಲ್ಲಿಕಾರ್ಜುನಸ್ವಾಮಿ ಹೇಳಿದರು. ನಗರದ ಯರಮರಸ್ ಡಯಟ್ನಲ್ಲಿ ಅಮೆರಿಕ ಇಂಡಿಯಾ ಫೌಂಡೇಷನ್ ಟ್ರಸ್ಟ್ನಿಂದ ಈಚೆಗೆ ಏರ್ಪಡಿಸಿದ್ದ ಡಿಜಿಟಲ್ ಇಕ್ವೆಲೈಸರ್ ಉದ್ಘಾಟನೆ ಹಾಗೂ ಕಂಪ್ಯೂಟರ್, ಪ್ರಾಜೆಕ್ಟರ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಶಿಕ್ಷಣದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಅವುಗಳನ್ನು ಅನುಸರಿಸಿಕೊಂಡು ಹೋಗಬೇಕಾಗಿದೆ. ತಂತ್ರಜ್ಞಾನ ಆಧಾರಿತ ಕಲಿಕೆಗೆ ಮಹತ್ವ ನೀಡಬೇಕು. ತಂತ್ರಜ್ಞಾನ ಆಧಾರಿತ ಕಲಿಕೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು. ಇದರಿಂದ ಹಾಜರಾತಿಯೂ ಹೆಚ್ಚಾಗಬಹುದು’ ಎಂದು ಅಭಿಪ್ರಾಯಪಟ್ಟರು.
ಫೌಂಡೇಷನ್ ಟ್ರಸ್ಟ್ನ ರಾಜ್ಯ ವ್ಯವಸ್ಥಾಪಕ ಪುನೀತ್ ಟಿ. ಮಾತನಾಡಿ, ‘ನಾಡಿನ ಎಲ್ಲ ಶಾಲೆಗಳಿಗೂ ಈ ವ್ಯವಸ್ಥೆ ಕಲ್ಪಿಸುವುದಕ್ಕೆ ಪ್ರಯತ್ನ ನಡೆದಿದೆ. ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಏಳಿಗೆ ಸಾಧಿಸಲು ಶಿಕ್ಷಕರು ಶ್ರಮಿಸಬೇಕು’ ಎಂದು ತಿಳಿಸಿದರು.
ರಾಯಚೂರು, ಸಿಂಧನೂರು ಹಾಗೂ ದೇವದುರ್ಗ ಬ್ಲಾಕ್ಗಳಿಗೆ ತಲಾ ಐದು, ಒಟ್ಟು 15 ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕಂಪ್ಯೂಟರ್ ಮತ್ತು ಪ್ರಾಜೆಕ್ಟರ್ ವಿತರಿಸಲಾಯಿತು. ಟ್ರಸ್ಟ್ ಪ್ರಾದೇಶಿಕ ಸಂಯೋಜಕ ಸುಧಾಕರ ಆರ್.ಭಂಡಾರಿ ಇದ್ದರು.