ಬೆಂಗಳೂರು: ‘ಸಂಬಂಧಿಕರನ್ನು ನೋಡಲು ಹಾಗೂ ಅವರು ತರುವ ಮನೆಯ ಊಟ ತಿನ್ನಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೆಲ ಕೈದಿಗಳು ಮಂಗಳವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ ತಿಂಡಿ ತಿನ್ನಲು ಬ್ಯಾರಕ್ನಿಂದ ಹೊರಬಂದಿದ್ದ ಕೈದಿಗಳು, ಜೈಲಿನ ಮೈದಾನದಲ್ಲಿ ಸೇರಿ ಘೋಷಣೆ ಕೂಗಿದರು. ಸ್ಥಳಕ್ಕೆ ಬಂದ ಅಧಿಕಾರಿಗಳು, ಕೈದಿಗಳ ವರ್ತನೆ ಪ್ರಶ್ನಿಸಿದರು. ಗೊಂದಲದ ವಾತಾವರಣ ನಿರ್ಮಾಣವಾಯಿತು. 10 ನಿಮಿಷಗಳ ಬಳಿಕ ಪ್ರತಿಭಟನೆ ಅಂತ್ಯಗೊಳಿಸಿದರು.
’ಈ ಹಿಂದೆ ಕಾರಾಗೃಹ ಇಲಾಖೆಯ ಅಧಿಕಾರಿಗಳ ನಡುವೆ ನಡೆದಿದ್ದ ಜಟಾಪಟಿಯಿಂದಾಗಿ ಹಲವು ನಿಯಮಗಳನ್ನು ಬದಲಾವಣೆ ಮಾಡಲಾಗಿದೆ. ಸಂಬಂಧಿಕರನ್ನು ಭೇಟಿಯಾಗುವುದು ಕಠಿಣವಾಗಿದೆ’ ಎಂದು ಕೈದಿಗಳು ಅಧಿಕಾರಿಗಳ ಬಳಿ ಹೇಳಿಕೊಂಡಿರುವುದಾಗಿ ಗೊತ್ತಾಗಿದೆ.
ಈ ಬಗ್ಗೆ ಮಾತನಾಡಿದ ಜೈಲಿನ ಅಧಿಕಾರಿಯೊಬ್ಬರು, ‘ಈ ಹಿಂದೆ ಜೈಲಿನಲ್ಲಿ ಅಕ್ರಮಗಳು ನಡೆಯುತ್ತಿದ್ದವು. ಈಗ ಅದಕ್ಕೆಲ್ಲ ಕಡಿವಾಣ ಹಾಕಿ ನಿಯಮಗಳನ್ನು ಬಿಗಿ ಮಾಡಲಾಗಿದೆ. ಅದೇ ಕಾರಣಕ್ಕೆ ಇಂದು ಕೈದಿಗಳು ಪ್ರತಿಭಟನೆ ಮಾಡಿದ್ದಾರೆ. ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ’ ಎಂದು ಹೇಳಿದರು.