ಗಜೇಂದ್ರಗಡ: ‘ರಾಜ್ಯದಲ್ಲಿ ಮೋಡಬಿತ್ತನೆಯಿಂದ ಉತ್ತಮ ಮಳೆಯಾಗಿದ್ದು, ಇದು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂದ ಗೆಲುವು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಮೋಡಬಿತ್ತನೆ ಪರಿಣಾಮದ ಕುರಿತು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ಅವರನ್ನೇ ಕೇಳಬಹುದು. ಅವರು ಪದೇ ಪದೇ ಮಳೆ ಎಲ್ಲಿದೆ ಎಂದು ಕೇಳುತ್ತಿದ್ದರು. ಕೊನೆಗೆ ಅವರೇ ಮಳೆಯಿಂದ ನೆನೆದುಕೊಂಡು ಮನೆ ಸೇರುವಂತಾಯಿತು’ ಎಂದು ವ್ಯಂಗ್ಯವಾಡಿದರು.
‘ವೈಜ್ಞಾನಿಕ ಪ್ರಗತಿಯ ಬಗ್ಗೆ ಅರಿವುಳ್ಳವರು ಮೋಡಬಿತ್ತನೆ ಅಲ್ಲಗಳೆಯಲಾರರು. ಇದು ಪಾರದರ್ಶಕವಾಗಿ ನಡೆದಿದೆ. ಕತ್ತೆ ಮದುವೆ, ಕಪ್ಪೆ ಮದುವೆಯಿಂದ ಮಳೆ ಬರುತ್ತದೆ ಎಂಬ ಮೋಢನಂಬಿಕೆ ಹೊಂದಿದವರು ಇದನ್ನು ವಿರೋಧಿಸುವುದು ಸಹಜ’ ಎಂದರು.