ಮಾಯಕೊಂಡ: ಈಚೆಗೆ ಸುರಿದ ಮಳೆಯಿಂದ ಇಲ್ಲಿನ ಕೆಂಚಾಲಪ್ಪನ ಕೆರೆಗೆ ನೀರು ಬಂದಿದ್ದು, ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಗಂಗಾಪೂಜೆ ನೆರವೇರಿಸಿದರು. ಕೆರೆ ಕೋಡಿ ಬಳಿ ಚಪ್ಪರ ಹಾಕಿ ಪುಷ್ಪಾಲಂಕಾರ ಮಾಡಲಾಯಿತು. ದೇವಸ್ಥಾನದಿಂದ ಗಂಗಾದೇವಿ ಪ್ರತಿಮೆ ತಂದು, ಸಂಪ್ರದಾಯದಂತೆ ಪ್ರತಿಷ್ಠಾಪಿಸಲಾಯಿತು.
ಗಂಗಾದೇವಿಗೆ 101 ಪೂಜೆ ಸಲ್ಲಿಸಿ, ಕೆರೆಗೆ ಎಡೆ ಸಮರ್ಪಿಸಲಾಯಿತು. ಚಂದ್ರಶೇಖರಯ್ಯ ಪೂಜೆ ನೆರವೇರಿಸಿದರು. ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಬಿಜೆಪಿ ಮುಖಂಡ ಎಚ್.ಆನಂದಪ್ಪ, ಪುರಸಭಾ ಮಾಜಿ ಅಧ್ಯಕ್ಷ ಎಸ್.ನೀಲಪ್ಪ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಬಿ.ಟಿ. ಹನುಮಂತಪ್ಪ, ಕನ್ನಡ ಯುವಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀನಿವಾಸ, ಬಟ್ಟಲಕಟ್ಟೆ ಮಲ್ಲಪ್ಪ, ಶೇಷಗಿರಿ ಪುಟ್ಟಸ್ವಾಮಿ, ಬಡ್ಡೆ ದುರುಗಪ್ಪರ ಗಂಗಾಧರ, ಗೌಡ್ರ ನಟರಾಜ, ಟಿ.ಬಸವರಾಜ ಹಾಜರಿದ್ದರು.