ರಾಯಚೂರು: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಸರ್ಕಾರದ ಮೇಲೆ ಒತ್ತಡ ಹಾಕಲು ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕದಿಂದ ಶಾಸಕರಾದ ತಿಪ್ಪರಾಜು ಹವಾಲ್ದಾರ, ಡಾ.ಶಿವರಾಜ್ ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಒಳಮೀಸಲಾತಿಗಾಗಿ ಹಲವು ವರ್ಷಗಳಿಂದ ಶಾಂತಿಯುತವಾಗಿ ಹೋರಾಟವನ್ನು ನಡೆಸಲಾಗಿದ್ದು, ಇದನ್ನು ಅಸಾಯಕತೆ ಎಂದು ಭಾವಿಸಿದರೆ ಮೂರ್ಖತನವಾಗಲಿದೆ. 70 ವರ್ಷಗಳಿಂದ ಮೀಸಲಾತಿಯಲ್ಲಿ ಅನ್ಯಾಯವಾಗಿದ್ದು, ಸಮುದಾಯದ ಜನರು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ದಯನೀಯ ಸ್ಥಿತಿಯಲ್ಲಿದ್ದಾರೆ ಎಂದು ಸಮಿತಿಯ ಪದಾಧಿಕಾರಿಗಳು ಮನವರಿಕೆ ಮಾಡಿದರು.
ಮೀಸಲಾತಿ ಲಾಭಪಡೆದ ಬೇರೆ ಸಮುದಾಯದವರು ನೂರಾರು ಸಂಖ್ಯೆಯಲ್ಲಿ ಐಎಎಸ್ ಹಾಗೂ ಐಪಿಎಸ್ ಹುದ್ದೆಯಲ್ಲಿದ್ದಾರೆ. ಆದರೆ, ಮಾದಿಗ ಸಮುದಾಯದವರ ಸಂಖ್ಯೆ ಹತ್ತಾರು ದಾಟಿಲ್ಲ. ಆದ್ದರಿಂದ ಒಳಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಒದಗಿಸಿಕೊಡಲು ಸಮುದಾಯದ ಪರವಾಗಿ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಘಟಕ ಉಪಾಧ್ಯಕ್ಷ ಬಿ.ನರಸಪ್ಪ ದಂಡೋರ, ಮರ್ಚೆಟ್ಹಾಳ ನರಸಿಂಹಲು, ಪ್ರಭು, ಮಲಿಯಾಬಾದ್ ಮಲ್ಲಯ್ಯ, ಗಧಾರ ಜೇಮ್ಸ್, ನರಸಿಂಹ, ದುಗನೂರು ಸುರೇಶ ಇದ್ದರು.