ಮಂಗಳೂರು ಬಂದರು ನವೆಂಬರ್ನಿಂದ ನಿರ್ಮಾಣ
ಬೆಂಗಳೂರು, ಅ. 22– ಸುಮಾರು 43 ಕೋಟಿ ರೂ. ವೆಚ್ಚದ ಮಂಗಳೂರು ಬಂದರು ಯೋಜನೆಯ ಪ್ರಥಮ ಹಂತದ ಕಾರ್ಯ ಮುಂದಿನ ತಿಂಗಳು ಪ್ರಾರಂಭವಾಗುವುದೆಂದು ತಿಳಿದು ಬಂದಿದೆ.
ಸದ್ಯದಲ್ಲೇ ಪ್ರಾರಂಭವಾಗಲಿರುವ ಕಾರ್ಯಕ್ರಮದ ಒಟ್ಟು ವೆಚ್ಚ 26.96 ಕೋಟಿ ರೂ. ಗಳೆಂದು ಅಂದಾಜು ಮಾಡಲಾಗಿದೆ.
ಬಂದರಿನ ಸಾರಿಗೆ ಸಾಮರ್ಥ್ಯವನ್ನು ಇತ್ತೀಚೆಗೆ ಪರಿಶೀಲಿಸಿದ ಅಧ್ಯಯನ ತಂಡದ ವರದಿಯನ್ನು ಕೇಂದ್ರ ಸರಕಾರ ನಿರೀಕ್ಷಿಸುತ್ತಿದೆ. ಈ ವರದಿಯ ಪರಿಶೀಲನೆಯ ನಂತರ ಬಂದರು ನಿರ್ಮಾಣದ ಪ್ರಥಮ ಹಂತದ ಕಾರ್ಯಾರಂಭದ ವಿಚಾರದ ಸ್ಪಷ್ಟ ಚಿತ್ರ ಗೊತ್ತಾಗಲಿದೆ.
**
ಅನ್ಯಭಾಷೆ ಜನರಿಗೆ ಕೇಡು ಬಗೆಯುವ ಪ್ರವೃತ್ತಿ ವಿರುದ್ಧ ಚವಾಣ್ ಎಚ್ಚರಿಕೆ
ಪಣಜಿ, ಅ. 22– ಅನ್ಯಭಾಷೆ ಇಲ್ಲವೆ ಧಾರ್ಮಿಕ ಪಂಗಡದವರಿಗೆ ಕೇಡುಂಟು ಮಾಡಲು ಪ್ರಯತ್ನಿಸುವ ಮೂಲಕ ಇನ್ನೊಂದು ಪಂಗಡದವರು ಒಳಿತನ್ನು ಸಾಧಿಸಲು ಆಗುವುದಿಲ್ಲವೆಂದು ಕೇಂದ್ರ ಗೃಹ ಸಚಿವ ಶ್ರೀ ವೈ.ಬಿ. ಚವಾಣ್ ಅವರು ಇಂದು ಇಲ್ಲಿ ತಿಳಿಸಿದರು.
ಪಶ್ಚಿಮ ವಲಯ ಮಂಡಳಿಯ ಆರನೇ ಸಭೆಯನ್ನು ಉದ್ಘಾಟಿಸುತ್ತಾ ಶ್ರೀ ಚವಾಣ್ ರವರು, ‘ಭಾರತದಲ್ಲಿ ಪ್ರಜಾಸತ್ತೆ ಪರಿಪಕ್ವವಾಗಿದ್ದು ಚುನಾವಣೆಗಳು ನ್ಯಾಯವಾಗಿ ನಡೆದಿರುವುದು ನಿಸ್ಸಂದೇಹ. ಆದರೂ, ಎಲ್ಲಕ್ಕಿಂತ ಮಿಗಿಲಾದ ರಾಷ್ಟ್ರೀಯ ಐಕ್ಯತೆಯ ಗುರಿಯನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳುವುದು ಅಗತ್ಯ’ ಎಂದರು.
**
ಬೆಣಚುಕಲ್ಲು ತುಂಬಿದ ಬಂಜರು ಭೂಮಿಯಲ್ಲಿ ಬಂಗಾರದಂಥ ಬೆಳೆ
ಬೆಂಗಳೂರು, ಅ. 22– ಬೆಣಚುಕಲ್ಲು ತುಂಬಿದ ಬಂಜರು ಭೂಮಿಯಲ್ಲಿ ಬಂಗಾರದಂಥ ಬೆಳೆ ತೆಗೆಯುವ ಆಶೆ, ಸಾಹಸ, ಈ ಉದ್ದೇಶ ಸಾಧನೆಗೆ ನಾಲ್ಕು ವರ್ಷಗಳ ವಯಸ್ಸಿನ ರಾಜ್ಯದ ಕೃಷಿ ವಿಶ್ವವಿದ್ಯಾಲಯದ ವಿಸ್ತರಣ ವಿಭಾಗದ ತಾಂತ್ರಿಕ ನೆರವು ಜ್ಞಾನದಾನ, ಇವುಗಳ ಫಲ, ಹಚ್ಚ ಹಸುರಾಗಿ ನಲಿಯುವ ಫಸಲು.
ಇದನ್ನು ಇಂದು ಪ್ರತ್ಯಕ್ಷ ಕಂಡವರು ಹಲವು ಮಂದಿ ಪತ್ರಕರ್ತರು ಮತ್ತು ಅಧಿಕಾರಿಗಳು. ಕೃಷಿ ವಿಶ್ವವಿದ್ಯಾನಿಲಯದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳಲ್ಲಿ ಒಂದಾದ ವಿಸ್ತರಣ ಕಾರ್ಯಕ್ರಮದ ಅಂಗವಾಗಿ ಈ ವಿಭಾಗವು ಬೆಂಗಳೂರು ಜಿಲ್ಲೆಯ ದಕ್ಷಿಣ ತಾಲ್ಲೂಕಿನಲ್ಲಿ ಕೈಗೊಂಡಿರುವ ಕೆಲವು ಪ್ರಾಯೋಗಿಕ ಕ್ಷೇತ್ರಗಳನ್ನು ಸಂದರ್ಶಿಸಲಾಗುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.