ಚೆನ್ನೈ: ವಿವಾದಕ್ಕೆ ಒಳಗಾದ ‘ಮರ್ಸಲ್’ ತಮಿಳು ಚಿತ್ರದ ಪರ ದನಿ ಎತ್ತಿರುವ ಎಐಎಡಿಎಂಕೆಯ ಭಿನ್ನಮತೀಯ ಮುಖಂಡ ಟಿ.ಟಿ.ವಿ. ದಿನಕರನ್ ಅವರು, ‘ಜಿಎಸ್ಟಿಗೆ ಸಂಬಂಧಿಸಿದ ಸಂಭಾಷಣೆಗಳನ್ನು ಅಳಿಸುವಂತೆ ಬಿಜೆಪಿ ಒತ್ತಾಯಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾಡುತ್ತಿರುವ ಅವಮಾನ’ ಎಂದಿದ್ದಾರೆ.
ಚಿತ್ರದ ವಿವಾದಕ್ಕೆ ಸಂಬಂಧಿಸಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಚಿತ್ರಕ್ಕೆ ಇಷ್ಟು ಪ್ರಚಾರ ನೀಡಿದ್ದಕ್ಕಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್. ರಾಜಾ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ತಮಿಳಿಸೈ ಸೌಂದರಾಜನ್ ಅವರಿಗೆ ಚಿತ್ರತಂಡವು ಧನ್ಯವಾದ ಹೇಳಬೇಕು’ ಎಂದರು.
‘ಸರಕು ಮತ್ತು ಸೇವಾ ತೆರಿಗೆಯು ಜನರ ಮೇಲೆ ಉಂಟು ಮಾಡಿದ ಪರಿಣಾಮವನ್ನು ಒತ್ತಿ ಹೇಳಲು ಚಿತ್ರ ಪ್ರಯತ್ನಿಸಿದೆ ಅಷ್ಟೇ. ಸೆನ್ಸಾರ್ ಮಂಡಳಿಯೇ ಸಂಭಾಷಣೆಗಳನ್ನು ಅಳಿಸಲು ಹೇಳಿಲ್ಲ. ರಾಜಾ ಅವರೇಕೆ ಸಿಟ್ಟಾಗುತ್ತಾರೆ ಎಂಬುದು ತಿಳಿಯುತ್ತಿಲ್ಲ. ಅವರ ಧಾಟಿ ಬೆದರಿಸುವ
ರೀತಿಯಲ್ಲಿದೆ. ಇದು ನನ್ನನ್ನೂ ಒಳಗೊಂಡು ಯಾವ ರಾಜಕಾರಣಿಗೂ ಶೋಭೆ ತರುವಂಥದ್ದಲ್ಲ’ ಎಂದು ಅವರು ಹೇಳಿದ್ದಾರೆ.
ರಜನಿಕಾಂತ್ ಬೆಂಬಲ: ‘ಮರ್ಸಲ್’ ಚಿತ್ರವು ಪ್ರಮುಖವಾದ ವಿಚಾರವೊಂದರ ಕುರಿತು ದನಿ ಎತ್ತಿದೆ ಎಂದು ಹೇಳಿರುವ ಹಿರಿಯ ನಟ ರಜನಿಕಾಂತ್ ಚಿತ್ರಕ್ಕೆ ಬೆಂಬಲಿಸಿದ್ದಾರೆ.
‘ಪ್ರಮುಖ ವಿಚಾರವೊಂದರ ಕುರಿತು ಧ್ವನಿ ಎತ್ತಿದ್ದೀರಿ. ಒಳ್ಳೆಯ ಕೆಲಸ. ಅಭಿನಂದನೆಗಳು ಮರ್ಸಲ್ ಚಿತ್ರತಂಡ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ವಿಜಯ್ ವಿರುದ್ಧ ದೂರು: ‘ಮರ್ಸಲ್’ ಚಿತ್ರದಲ್ಲಿ ದೇವಾಲಯಗಳು ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಕೆಟ್ಟದಾಗಿ ತೋರಿಸಲಾಗಿದೆ’ ಎಂದು ಚಿತ್ರದ ನಟ ವಿಜಯ್ ವಿರುದ್ಧ ವಕೀಲ ಮುತ್ತು ಕುಮಾರ್ ಎಂಬುವವರು ಮದುರೆಯಲ್ಲಿ ದೂರು ದಾಖಲಿಸಿದ್ದಾರೆ.
**
ವಿಜಯ್ ವಿರುದ್ಧ ದೂರು
‘ಮರ್ಸಲ್’ ಚಿತ್ರದಲ್ಲಿ ದೇವಾಲಯಗಳು ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಕೆಟ್ಟದಾಗಿ ತೋರಿಸಲಾಗಿದೆ’ ಎಂದು ಚಿತ್ರದ ನಟ ವಿಜಯ್ ವಿರುದ್ಧ ವಕೀಲ ಮುತ್ತು ಕುಮಾರ್ ಎಂಬುವವರು ಮದುರೆಯಲ್ಲಿ ದೂರು ದಾಖಲಿಸಿದ್ದಾರೆ.