ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 26–10–1967

Last Updated 25 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಎಸ್.ಎಸ್.ಪಿ.– ಪಿ.ಎಸ್.ಪಿ. ವಿಲೀನ ಖಚಿತ: ಜೋಷಿ

ಪಟ್ಣ, ಅ. 25– ಸರ್ವೋದಯ ನಾಯಕ ಶ್ರೀ ಜಯಪ್ರಕಾಶ್ ನಾರಾಯಣ್ ಅವರ ಮಾರ್ಗದರ್ಶನದಲ್ಲಿ ಎಸ್.ಎಸ್.ಪಿ.– ಪಿ.ಎಸ್.ಪಿ. ವಿಲೀನ ಖಚಿತ. ರಾಷ್ಟ್ರದ ಎಲ್ಲಾ ಸಮಾಜವಾದಿಗಳೂ ಶ್ರೀ ಜೆ.ಪಿ. ಮಾರ್ಗದರ್ಶನದಂತೆ ಒಕ್ಕೂಟದಲ್ಲಿ ಸೇರಲೇಬೇಕಾಗಿದೆ ಎಂದು ನಿನ್ನೆ ಇಲ್ಲಿಗೆ
ಆಗಮಿಸಿದ ಎಸ್.ಎಸ್.ಪಿ. ಅಧ್ಯಕ್ಷ ಶ್ರೀ ಎಸ್.ಎಂ. ಜೋಷಿ ಅವರು ಸಂದರ್ಶನ ಒಂದರಲ್ಲಿ ತಿಳಿಸಿದರು. ಆದರೆ ಇದಕ್ಕೆ ಕಾಲಾವಕಾಶ ಮಾತ್ರ ಬೇಕಾಗಿರುವುದಾಗಿ ಅವರು ಹೇಳಿದರು. ರಾಷ್ಟ್ರದ ರಾಜಕೀಯದಲ್ಲಿ ಮುಂದೆ ಶ್ರೀ ಜಯಪ್ರಕಾಶ್ ನಾರಾಯಣ್ ಅವರ ಮಹತ್ವದ ‍‍ಪಾತ್ರ ಪ್ರಸ್ತಾಪಿಸುತ್ತಾ, ಸಮಾಜವಾದಿಗಳಿಗೆ ಬುದ್ಧಿವಾದ ಮತ್ತು ಮಾರ್ಗದರ್ಶನ ನೀಡಲು ಡಾ. ಲೋಹಿಯಾ ಅವರು ಬದುಕಿದ್ದಾಗಲೇ ಜಯಪ್ರಕಾಶರು ಮುಂದೆ ಬಂದಿದ್ದರೆಂದೂ ಶ್ರೀ ಜೋಷಿ ತಿಳಿಸಿದರು.

ಈಜಿಪ್ಟಿನ ಎರಡು ಬೃಹತ್ ತೈಲ ಶುದ್ಧೀಕರಣ ಕೇಂದ್ರ ಧ್ವಂಸ: ಸೂಯೆಜ್ ಬಳಿ ಮತ್ತೆ ಇಸ್ರೇಲಿ ಆಕ್ರಮಣ– ಭಯಂಕರ ಜ್ವಾಲೆ

ಸೂಯೆಜ್, ಸಂಯುಕ್ತ ಅರಬ್ ಗಣರಾಜ್ಯ, ಅ. 25– ಇಸ್ರೇಲಿ ಫಿರಂಗಿಗಳು ನಿನ್ನೆ ಮೂರು ಗಂಟೆಗಳ ಕಾಲ ಯು.ಎ.ಆರ್.ನ. ಎರಡು ಭಾರಿ ತೈಲ ಶುದ್ಧೀಕರಣ ಕೇಂದ್ರಗಳ ಮೇಲೆ ಬಾಂಬ್ ಮಳೆ ಸುರಿಸಿದುದರಿಂದ ಧಗಧಗನೆ ಉರಿಯುತ್ತಿದ್ದ ಜ್ವಾಲೆ ಮತ್ತು ದಟ್ಟ ಹೊಗೆ ಇಂದು ಗಗನಾಭಿಮುಖವಾಗಿ ಏರುತ್ತಿತ್ತು.

ಭಾರಿ ನಾಸೆರ್ (ವಿಜಯ) ತೈಲ ಶುದ್ಧೀಕರಣ ಕೇಂದ್ರ ಸಂಪೂರ್ಣವಾಗಿ ನಾಶವಾಗಿದೆಯೆಂದೂ, ಅದರ ಶಾಖೆ ಸೂಯೆಕ್ಸ್ ಅರ್ಧ ನೆಲಸಮವಾಗಿರುವುದಾಗಿಯೂ ಸೂಯೆಜ್ ಗವರ್ನರ್ ಹಮೀದ್ ಮಹಮೂದ್ ಪತ್ರಕರ್ತರಿಗೆ ತಿಳಿಸಿದರು.

ಬ್ಯಾಂಕ್ ರಾಷ್ಟ್ರೀಕರಣ ಸಂಪುಟದಲ್ಲಿ ಪ್ರಬಲ ಒತ್ತಾಯ

ನವದೆಹಲಿ, ಅ. 25– ಎ.ಐ.ಸಿ.ಸಿ.ಯ ದಶಾಂಶ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಕೇಂದ್ರ ಸಂಪುಟ ಇಂದು ಎರಡೂವರೆ ಗಂಟೆ ಸಮಯ ಚರ್ಚಿಸಿತು.

ಇಂದಿನ ಕಾರ್ಯಕಲಾಪಗಳು ರಹಸ್ಯವಾಗಿರಬೇಕೆಂದು ಪ್ರಧಾನಿ ಕಟ್ಟುನಿಟ್ಟಾದ ಆಜ್ಞೆ ವಿಧಿಸಿದ್ದರು.

ಬ್ಯಾಂಕ್‌ಗಳ ರಾಷ್ಟ್ರೀಕರಣಕ್ಕೆ ಪ್ರಬಲ ಒತ್ತಾಯವಿರುವಂತಿದೆ. ಆದರೆ ಅವುಗಳ ಸಾಮಾಜಿಕ ನಿಯಂತ್ರಣ ಕುರಿತು ತಮ್ಮ ಯೋಜನೆಗೆ ಒಂದು ಪ್ರಯೋಗಾವಕಾಶ ಕೊಡಬೇಕೆಂದೂ ಅದು ವಿಫಲವಾದರೆ ಇತರ ಕ್ರಮಗಳ ಪರಿಶೀಲನೆಗೆ ತಾವು ಸಿದ್ಧವೆಂದೂ ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿಯವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT