ತ್ಯಾಗರ್ತಿ: ಗ್ರಾಮೀಣ ಪ್ರದೇಶದಲ್ಲಿ ಅಗ್ನಿ ಅವಘಢ ಸಂಭವಿಸಿದಾಗ ತಕ್ಷಣ ರಕ್ಷಣಾ ಕಾರ್ಯದಲ್ಲಿ ತೊಡಗಲು ಫೈರ್ ವಾರ್ಡನ್ ಎಂಬ ತಂಡ ರಚಿಸಲಾಗುತ್ತಿದೆ. ಪ್ರತಿ ಗ್ರಾಮದಲ್ಲೂ 18ರಿಂದ 50 ವರ್ಷದ ಒಳಗಿನ 20ರಿಂದ 30 ಜನರಿಗೆ ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತಿದೆ ಎಂದು ಸಾಗರ ಅಗ್ನಿಶಾಮಕ ದಳ ಅಧಿಕಾರಿ ಪರಮೇಶ್ವರ್ ಹೇಳಿದರು.
ಸಾಗರ ತಾಲ್ಲೂಕಿನ ನಂದೀತಳೆಯಲ್ಲಿ ಉಳ್ಳೂರಿನ ಸಿಗಂಧೂರೇಶ್ವರಿ ಕಾಲೇಜಿನ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಂದ ನೆಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಅಗ್ನಿ ಅವಗಡ ಕುರಿತು ನಡೆದ ಪ್ರಾತ್ಯಕ್ಷಿಕೆಯಲ್ಲಿ ಅವರು ಮಾಹಿತಿ ನೀಡಿದರು.
ಬೆಂಕಿ ಬೃಹತ್ ಅಥವಾ ಚಿಕ್ಕ ಪ್ರಮಾಣದಲ್ಲಿ ಇರಲಿ ಕಡೆಗಣಸದೇ ಸುರಕ್ಷತಾ ಕ್ರಮ ಅನುಸರಿಸಿ ಬೆಂಕಿ ಆರಿಸಲು ಪ್ರಯತ್ನಿಸಬೇಕು ಹಾಗೂ ಸಹಾಯಕ್ಕಾಗಿ ತುರ್ತು ಸೇವಾ ದೂರವಾಣಿಗೆ ಕರೆ ಮಾಡಿ ತಿಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಡುಗೆ ಅನಿಲ ಸೋರಿಕೆ ಕಂಡುಬಂದರೆ ಅನುಸರಿಸಬೇಕಾದ ಕ್ರಮಗಳ ಮಾಹಿತಿ ನೀಡಿದರು. ಜೀವ ಮತ್ತು ಆಸ್ತಿ ಪಾಸ್ತಿ ರಕ್ಷಣೆಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.
ಬೆಳಗಿನ ಗೋಷ್ಠಿಯಲ್ಲಿ ‘ನಮ್ಮ ನಿಮ್ಮೆಲ್ಲರ ಆರೋಗ್ಯ’ ವಿಷಯ ಕುರಿತು ಮೆಟ್ರೋ ಯುನೈಟೆಡ್ ಹೆಲ್ತ್ ಕೇರ್ ಸಿಇಒ ಡಾ.ಟಿ.ಎಸ್. ತೇಜಸ್ವಿ ಮಾತನಾಡಿ, ‘ಆಹಾರ ಪದ್ಧತಿಯಲ್ಲಿ ಪೌಷ್ಟಿಕಾಂಶಯುಕ್ತ ಆಹಾರದ ಬಳಕೆ ಕಡಿಮೆಯಾಗಿದೆ. ಇದರಿಂದ ನಾನಾ ತರಹದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ.
ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸುತ್ತಿರಬೇಕು. 40 ವರ್ಷ ಮೇಲಿನವರು ಪ್ರತಿ 3 ತಿಂಗಳಿಗೆ ಆರೋಗ್ಯ ತಪಾಸಣೆ ಮಾಡಿಸಬೇಕು. ಕೊಬ್ಬಿನಂಶ ಇರುವ ಪದಾರ್ಥ, ಮೈದಾ ಹಾಗೂ ಜಂಕ್ ಫುಡ್ ಗಳ ಬಳಕೆ ಕಡಿಮೆ ಮಾಡಿ ಬೇಳೆಕಾಳು, ಮೊಳಕೆಕಾಳು ನಾರುಯುಕ್ತ ಪದಾರ್ಥ ಸೇವಿಸಬೇಕು’ ಎಂದು ಸಲಹೆ ನೀಡಿದರು.
ಮೆಟ್ರೋ ಯುನೈಟೆಡ್ ಹೆಲ್ತ್ ಕೇರ್ ವತಿಯಿಂದ 98 ಜನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ಪ್ರಾಂಶುಪಾಲ ಡಾ.ಎಮ್.ಎಸ್. ಪ್ರಶಾಂತ್ ಅಧ್ಯಕ್ಷತೆ ವಹಿಸಿದ್ದರು. ಡಾ.ಮಾಧವ್, ಶ್ರೀಕಾಂತ್, ಶ್ರೀನಿವಾಸ್, ಹಾಲು ಒಕ್ಕೂಟದ ಮಾಜಿ ಅಧ್ಯಕ್ಷೆ ಸುವರ್ಣ, ಗ್ರಾಮ ಪಂಚಾಯ್ತಿ ಸದಸ್ಯೆ ಮಮತಾ, ಅಗ್ನಿ ಶಾಮಕ ದಳದ ಈಶ್ವರ್ ನಾಯಕ್, ನಂದಕುಮಾರ್, ಚನ್ನಪ್ಪ, ರವಿ ಉಪಸ್ಥಿತರಿದ್ದರು.