ಗಾಜಿಯಾಬಾದ್: ಛತ್ತೀಸ್ಗಡದ ಸಚಿವರೊಬ್ಬರಿಗೆ ಹಣಕ್ಕಾಗಿ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಪತ್ರಕರ್ತ ವಿನೋದ್ ವರ್ಮಾ ಅವರನ್ನು ಛತ್ತೀಸ್ಗಡ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಸಚಿವರೊಬ್ಬರು ಭಾಗಿಯಾಗಿದ್ದಾರೆನ್ನಲಾದ ಲೈಂಗಿಕ ಕ್ರಿಯೆಯ ವಿಡಿಯೊ ಸಿಡಿ ಇಟ್ಟುಕೊಂಡಿದ್ದ ವಿನೋದ್ ವರ್ಮಾ ಹಣಕ್ಕಾಗಿ ಅವರಿಗೆ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ.
‘ಇಂದಿರಾಪುರದಲ್ಲಿರುವ ವಿನೋದ್ ಅವರ ನಿವಾಸದಿಂದ ಅವರನ್ನು ಬಂಧಿಸಲಾಗಿದೆ. ಅವರಿಗೆ ಸೇರಿದ ಲ್ಯಾಪ್ಟಾಪ್, ಪೆನ್ಡ್ರೈವ್ ಹಾಗೂ ಸಿಡಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
‘ಬಿಬಿಸಿ’ಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದ ವಿನೋದ್ ಕೆಲಕಾಲ ‘ಅಮರ್ ಉಜಾಲಾ’ದ ಡಿಜಿಟಲ್ ಆವೃತ್ತಿಯ ಸಂಪಾದಕರಾಗಿದ್ದರು. ಸದ್ಯ ಅವರು ಬಿಡುವಿನ ಬರಹಗಾರ (ಫ್ರೀಲಾನ್ಸರ್) ಆಗಿದ್ದರು.