ಶಹಾಬಾದ: ನಗರದ ಜಿಇ ಕಾಲೊನಿಗೆ ಮೂಲ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ಎಬಿಬಿ-ಎಬಿಎಲ್ ಸ್ವಯಂ ನಿವೃತ್ತಿ ಕಾರ್ಮಿಕರ ಸಂಘದವರು ಅಧಿಸೂಚಿತ ಕ್ಷೇತ್ರ ಸಮಿತಿಯ ಅಧಿಕಾರಿ ಪೀರಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಎಂ.ಗಾಯಕವಾಡ್, ನಗರ ಜಿಇ ಕಾಲೋನಿಗೆ ಅಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಇದರಿಂದ ಅನೇಕ ರೋಗಗಳು ಉಂಟಾಗುತ್ತಿವೆ. ಆದ್ದರಿಂದ ಸರ್ಕಾರದಿಂದ ನಿರ್ಮಿಸ ಲಾದ ಜಲಸಂಗ್ರಹಾಗಾರವನ್ನು ಅಧಿಸೂಚಿತ ಕ್ಷೇತ್ರ ಸಮಿತಿಯ ಸುರ್ಪದಿಗೆ ತೆಗೆದುಕೊಂಡು ಎಬಿಬಿ-ಎಬಿಎಲ್ (ಅಲಸ್ಟಾಂ) ಕಾರ್ಖಾನೆಯ ಸ್ವಯಂ ನಿವೃತ್ತಿ ಪಡೆದ ಕಾರ್ಮಿಕರ ಕಾಲೊನಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು’ ಎಂದು ಆಗ್ರಹಿಸಿದರು.
‘ಕಾಲೊನಿಯ ನೈರ್ಮಲ್ಯ ಸಮಸ್ಯೆ ಹದಗೆಟ್ಟು ಹೋಗಿದೆ. ಒಳಚರಂಡಿ ನೀರು ಎಲ್ಲೆಂದರಲ್ಲಿ ಸೋರಿಕೆಯಾಗಿರುವುದರಿಂದ ಹಲವು ರೋಗಗಳಿಗೆ ತುತ್ತಾಗುತ್ತಿದ್ದೇವೆ. ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಕೂಡ ಮಾಡುತ್ತಿಲ್ಲ. ಹಂದಿಗಳ ಕಾಟ ಹೆಚ್ಚಾಗಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಮನವಿಪತ್ರ ಸ್ವೀಕರಿಸಿದ ಅಧಿಸೂಚಿತ ಕ್ಷೇತ್ರ ಸಮಿತಿಯ ಅಧಿಕಾರಿ ಪೀರಶೆಟ್ಟಿ, ಬೇಡಿಕೆಗಳನ್ನು ಆದಷ್ಟು ಬೇಗನೆ ಈಡೇರಿಸುವ ಭರವಸೆ ನೀಡಿದರು. ಅಲ್ಲದೇ, ಕಾಲೊನಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಪ್ರಯತ್ನಪಡುವುದಾಗಿ ಹೇಳಿದರು.