ಶಿವಮೊಗ್ಗ: ಮಹಿಳೆಯರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಜಿಲ್ಲಾ ಮಹಿಳಾ ಮೋರ್ಚಾ ಮಾಧ್ಯಮ ಪ್ರಮುಖರಾದ ಆರ್.ಎಸ್.ಶೋಭಾ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ನಗರ ಮಹಿಳಾ ಮೋರ್ಚಾದ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಮಹಿಳೆಯರ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಿದೆ. ಶೇ 5 ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಿದೆ. ಈ ಅವಕಾಶವನ್ನು ಉಪಯೋಗಿಸಿ ಕೊಳ್ಳಬೇಕು. ದೇಶದಲ್ಲಿ ಭ್ರೂಣ ಹತ್ಯೆ ತಡೆಯಲು ಭೇಟಿ ಬಚಾವೋ ಭೇಟಿ ಪಡಾವೋ ಎಂಬ ಘೋಷಣೆಯನ್ನು ಹೊರಡಿಸಿ ಸಾವಿರಾರು ಕೋಟಿ ಅನುದಾನವನ್ನು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿಗೆ ಮೀಸಲಿರಿಸಿದ್ದಾರೆ. ಇದರ ಮಹತ್ವವನ್ನು ಮಹಿಳೆಯರು ತಿಳಿಯಬೇಕು ಎಂದು ಸಲಹೆ ನೀಡಿದರು.
ಚುನಾವಣೆ ಸಮೀಪಿಸುತ್ತಿದ್ದು, ಮಹಿಳಾ ಕಾರ್ಯಕರ್ತರು ಸಂಘಟಿತರಾಗಿ ತಮ್ಮ ತಮ್ಮ ವಾರ್ಡ್ಗಳಲ್ಲಿ ದಿನಕ್ಕೆ 20 ಮನೆಗಳಿಗೆ ಭೇಟಿ ನೀಡಿ ಸಂಘಟನೆಯ ಮೂಲಕ ಚುನಾವಣೆಗೆ ಸಿದ್ದರಾಗಲು ತಿಳಿಸಬೇಕು. ಕೇಂದ್ರ ಸರ್ಕಾರದ ಉತ್ತಮ ಆಡಳಿತ ಹಾಗೂ ರಾಜ್ಯ ಸರ್ಕಾರದ ವೈಫಲ್ಯವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಬಿಜೆಪಿಯತ್ತ ಒಲವು ಮೂಡುವಂತೆ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾದ ನಗರಾಧ್ಯಕ್ಷೆ ಸೀತಾಲಕ್ಷ್ಮೀ, ಅರ್ಚನಾ ಬಳ್ಳೇಕೆರೆ, ಸುರೇಖಾ ಮುರುಳೀಧರ್, ಸುನೀತಾ ಅಣ್ಣಪ್ಪ, ಸುವರ್ಣ ಶಂಕರ್, ವಿದ್ಯಾ ಲಕ್ಷ್ಮೀಪತಿ, ಹಿರಣ್ಣಯ್ಯ, ಎನ್.ಜಿ.ನಾಗರಾಜ್ ಉಪಸ್ಥಿತರಿದ್ದರು.