‘ಉಪೇಂದ್ರ ಮತ್ತೆ ಬಾ’ ಅಂತ ಒಂದು ಸಿನಿಮಾ ಸಿದ್ಧವಾಗುತ್ತಿರುವ ವಿಷಯ ನಿಮಗೆ ಗೊತ್ತು ತಾನೆ? ಇದು ತೆಲುಗಿನ ‘ಸೋಗ್ಗಾಡೆ ಚಿನ್ನಿ ನಾಯಿನ’ ಹೆಸರಿನ ಹಿಟ್ ಚಿತ್ರದ ಕನ್ನಡ ಅವತರಣಿಕೆ.
ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಮಿನುಗಿದ್ದ ನಾಗಾರ್ಜುನ ಅವರಷ್ಟೇ ಗಮನ ಸೆಳೆದವರು ಯಮನ ಪಾತ್ರದಲ್ಲಿ ಗಂಭೀರ ಅಭಿನಯ ನೀಡಿದ ಕೊಣಿದಲ ನಾಗೇಂದ್ರಬಾಬು.
ಟಾಲಿವುಡ್ನಲ್ಲಿ ರಾಜೇಂದ್ರ ಪ್ರಸಾದ್ ಸೇರಿದಂತೆ ಹಲವು ಘಟನಾಘಟಿಗಳು ಯಮನ ಪಾತ್ರ ನಿರ್ವಹಿಸಿದ್ದಾರೆ. ಕೆಲವರು ಅದನ್ನು ಹಾಸ್ಯಾಸ್ಪದ ಎನಿಸುವಂತೆ ಮಾಡಿದ್ದೂ ಉಂಟು. ಆದರೆ ನಾಗೇಂದ್ರಬಾಬು ಅಭಿನಯದಲ್ಲಿ ಯಮನ ಪಾತ್ರಕ್ಕೆ ಘನತೆ ಸಿಕ್ಕಿತ್ತು. ಇದೇ ಕಾರಣಕ್ಕೆ ‘ಉಪೇಂದ್ರ ಮತ್ತೆ ಬಾ’ ಸಿನಿಮಾದಲ್ಲಿಯೂ ಯಮನ ಪಾತ್ರ ಕುತೂಹಲ ಹುಟ್ಟಿಸಿದೆ.
143 ಸಿನಿಮಾಗಳಿಗೆ ಬಣ್ಣ ಹಚ್ಚಿರುವ ನಾಗೇಂದ್ರ ಬಾಬು (ಜನನ: 29ನೇ ಅಕ್ಟೋಬರ್ 1961) ಅವರಿಗೆ ನಿರ್ಮಾಪಕರಾಗಿಯೂ ದೊಡ್ಡ ಹೆಸರು ಇದೆ. ಸೋದರರಾದ ಮೆಗಾಸ್ಟಾರ್ ಚಿರಂಜೀವಿ, ಪವರ್ಸ್ಟಾರ್ ಪವನ್ ಕಲ್ಯಾಣ್ ಅವರೊಂದಿಗೆ ‘ಅಂಜನ’ ಸಿನಿಮಾ ನಿರ್ಮಾಣ ಸಂಸ್ಥೆ ಕಟ್ಟಿ ಹಲವು ಹಿಟ್ ಸಿನಿಮಾ ಕೊಟ್ಟಿದ್ದಾರೆ.
ಪ್ರಸ್ತುತ ‘ಈ ಟಿವಿ ತೆಲುಗು’ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಶೋಗೆ ತೀರ್ಪುಗಾರರಾಗಿದ್ದಾರೆ. v