ಬೆಂಗಳೂರು: ಸಂಚಾರ ನಿಯಮಗಳನ್ನು ಪಾಲಿಸುವಂತೆ ಶಾಲಾ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾಲ್ನಡಿಗೆ ಜಾಥಾ ನಡೆಸಿ ವಾಹನ ಸವಾರರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ಕೆ.ಆರ್.ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕೆ.ಆರ್. ಪುರ ವಿಧಾನಸಭಾ ಕ್ಷೇತ್ರದ ಕ್ಷೇಮಾಭಿವೃದ್ಧಿ ಸಂಘ ಮತ್ತು ಸಂಚಾರ ಪೊಲೀಸರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸಂಚಾರ ಅರಿವು ಜಾಥಾ ಅಭಿಯಾನ’ದಲ್ಲಿ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
‘ಕುಡಿದು ವಾಹನ ಚಲಾಯಿಸಬೇಡಿ, ವಾಹನ ಚಲಾಯಿಸುವಾಗ ಮೊಬೈಲ್ ಬಳಸಬೇಡಿ, ಜೀಬ್ರಾ ಕ್ರಾಸಿಂಗ್ ಬಳಸೋಣ, ಸಿಗ್ನಲ್ ಪಾಲನೆ, ಒಂದೇ ಲೈನ್ನಲ್ಲಿ ಚಲನೆ, ವೀಲಿಂಗ್ ಬೇಡ ಎಂಬ ಘೋಷ ವ್ಯಾಕ್ಯದೊಂದಿಗೆ ಪ್ರಥಮ ದರ್ಜೆ ಕಾಲೇಜಿನಿಂದ ಪ್ರಾರಂಭಗೊಂಡ ಜಾಥಾ ಬಿಬಿಎಂಪಿ ಕಚೇರಿಯವೆರಗೂ ಸಾಗಿತು.
ಸಂಚಾರ ಅರಿವು ಜಾಥಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಸಂಚಾರಿ ಪೂರ್ವ ವಿಭಾಗದ ಎಸಿಪಿ ಆರ್.ಐ.ಖಾಸೀಂ, ‘ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಪಘಾತ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದನ್ನು ತಡೆಗಟ್ಟಲು ಪ್ರತಿಯೊಬ್ಬರೂ ಸಂಚಾರ ಸುರಕ್ಷತೆಯ ನಿಯಮಗಳನ್ನು ಪಾಲಿಸಬೇಕು’ ಎಂದು ಮನವಿ ಮಾಡಿದರು.
ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ, ಅತಿವೇಗವಾಗಿ ವಾಹನ ಚಲಾಯಿಸುತ್ತಿದ್ದ, ಸೀಟ್ ಬೆಲ್ಡ್ ಹಾಕಿರದ ಹೀಗೆ ಸಂಚಾರ ನಿಯಮಗಳನ್ನು ಪಾಲಿಸದವರಿಗೆ ವಿದ್ಯಾರ್ಥಿಗಳು ಗುಲಾಬಿಯನ್ನು ನೀಡಿ ನಿಯಮ ಪಾಲಿಸುವಂತೆ ಮನವರಿಕೆ ಮಾಡಿದರು.