ಹಾಸನ: ‘ದೇಶ ರಕ್ಷಣೆ ಮಾಡುವ ಸೈನಿಕ, ಅನ್ನದಾತ, ವಿದ್ಯೆ ನೀಡುವ ಶಿಕ್ಷಕ ಮತ್ತು ಪೌರಕಾರ್ಮಿಕರನ್ನು ಕೀಳು ಭಾವನೆಯಿಂದ ನೋಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆಯಲ್ಲ’ ಎಂದು ಜಿಲ್ಲಾ ದಲಿತ ಮತ್ತು ಜನಪರ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಬೆಳಗುಲಿ ಕೆಂಪಯ್ಯ ಹೇಳಿದರು.
‘ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿಯಾಗುವುದು ಪ್ರಜಾಪ್ರಭುತ್ವ ರಾಷ್ಟ್ರದ ಪರಿಕಲ್ಪನೆಯಾಗಿದೆ. ದಲಿತ ಸಮುದಾಯ ಅನೇಕ ವರ್ಷದಿಂದ ಅಕ್ಷರದಿಂದ ವಂಚಿತವಾಗಿದೆ’ ಎಂದರು.
‘ಕತ್ತಲೆಯಿಂದ ಬೆಳಕಿನೆಡೆಗೆ ಹೆಜ್ಜೆ ಹಾಕುತ್ತಿರುವ ಸಮುದಾಯವೊಂದು ತನ್ನ ನಡಿಗೆಗೆ ಹೊಸ ಲಯ, ಮಾತಿನ ಭಿನ್ನ ನುಡಿಗಳನ್ನು ಕಂಡುಕೊಳ್ಳುತ್ತಿದೆ. ಮೂರು ದಶಕಗಳಿಂದ ದಲಿತ ಸಾಹಿತ್ಯದ ಜತೆಗೆ ಬಂಡಾಯ ಸಾಹಿತ್ಯವೂ ಬೆಳೆದು ಬಂದಿದೆ. ಎರಡು ಪ್ರಕಾರದಲ್ಲಿ ಸಾಹಿತ್ಯ ಕೃಷಿಗೆ ತೊಡಗಿದಲ್ಲಿ ಸಮುದಾಯದ ದೃಷ್ಟಿಯಿಂದ ಹಿತವಾಗಿರುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ದಲಿತರ ಸಂಸ್ಕೃತಿ, ಸಂಪ್ರದಾಯ ಸಮಸ್ಯೆ ಮತ್ತು ಸಂದೇಶಗಳ ಕುರಿತು ಬರೆದಾಗ ಹೆಚ್ಚು ಪರಿಣಾಮಕಾರಿಯಾಗಿ ಕಂಡು ಬರುತ್ತದೆ. ಶೂದ್ರ ಮತ್ತು ಅಸ್ಪ್ರಶ್ಯರ ನೋವು-ನಲಿವು, ತುಡಿತ-ಮಿಡಿತ, ಸಂಸ್ಕೃತಿ-ಸಂಪ್ರದಾಯಗಳು ವಿಭಿನ್ನವಾಗಿ ಕಾಣುತ್ತದೆ.
ದಲಿತ ಸಾಹಿತಿಗಳು ಬರೆದಾಗ ಹೇಗೆ ಹಸಿದವನು ಮಾತ್ರ ಹಸಿವಿನ ಬಗ್ಗೆ ಸಮರ್ಥವಾಗಿ ಬರೆಯಬಲ್ಲನೋ ಹಾಗೆಯೇ ಅಸ್ಪಶ್ಯತೆಯ ನೋವು ಅಪಮಾನ ಜಾತಿ ವ್ಯವಸ್ಥೆಯಲ್ಲಿನ ಅಂಕುಡೊಂಕುಗಳನ್ನು ಅನುಭವಿಸಿದವನು ಮಾತ್ರ ಸಮರ್ಥವಾಗಿ ಬರೆಯಬಲ್ಲ. ಅಂತ ಸಾಹಿತ್ಯ ನೈಜ ಹಾಗೂ ಗಟ್ಟಿ ಸಾಹಿತ್ಯವಾಗಿ ಉಳಿಯುತ್ತದೆ’ ಎಂದರು.