ರಾಮನಗರ: ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿಯ ಪರಿವರ್ತನಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ತಮ್ಮ ಬೆಂಬಲಿಗರೊಂದಿಗೆ ತೆರಳಿದರು.
ಚನ್ನಪಟ್ಟಣದಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಬೈಕ್ ಗಳಲ್ಲಿ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ಜೊತೆ ತೆರಳುತ್ತಿರುವುದಾಗಿ ಯೋಗೇಶ್ವರ್ ತಿಳಿಸಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸೇರುತ್ತಿದ್ದೇನೆ. ನನ್ನ ಕೊನೆಯ ರಾಜಕೀಯ ಜೀವನವನ್ನ ಬಿಜೆಪಿಯಲ್ಲೇ ಕಳೆಯುತ್ತೇನೆ.ಯಾವುದೇ ಕಾರಣಕ್ಕೂ ಮತ್ತೆ ಪಕ್ಷ ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದರು.
ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಪ್ರಾಮಾಣಿಕವಾಗಿ ಸಂಘಟನೆ ಮಾಡುತ್ತೇನೆ. ನನ್ನದು ಜನಪರವಾದ ರಾಜಕಾರಣ ಈ ಹಿನ್ನಲೆಯಲ್ಲಿ ಜನಬೆಂಬಲವಿದೆ. ಆದರೆ ಡಿ.ಕೆ.ಶಿವಕುಮಾರ್ ಅವರದ್ದು ಸಹಾಯ ಮಾಡಿದವರನ್ನೇ ತುಳಿಯುವ ರಾಜಕಾರಣ. ಡಿಕೆ ಸಹೋದರರಿಗೆ ಮುಂದಿನ ದಿನಗಳಲ್ಲಿ ನನ್ನ ಶಕ್ತಿ ಗೊತ್ತಾಗಲಿದೆ. ಕಾಂಗ್ರೆಸ್ ಪಕ್ಷದಿಂದ ಚನ್ನಪಟ್ಟಣವನ್ನ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಮನಗರ, ಬಿಡದಿ, ನೈಸ್ ರಸ್ತೆ ಮೂಲಕ ಬೆಂಗಳೂರಿನ ಮಾದಾವರ ಬಳಿಯ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಕಡೆಗೆ ಪ್ರಯಾಣ ಬೆಳೆಸಿದರು.