ಬೆಂಗಳೂರು: ಸುದ್ದಗುಂಟೆಪಾಳ್ಯ ವಾರ್ಡ್ನಲ್ಲಿ ‘ನಮ್ಮ ಬೆಂಗಳೂರು – ಸ್ವಚ್ಛ ಬೆಂಗಳೂರು’ ಸಂಸ್ಥೆ ಶನಿವಾರ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ನಗರವನ್ನು ಶುಚಿಯಾಗಿಡುವುದು ಕೇವಲ ಪೌರಕಾರ್ಮಿಕರ ಕೆಲಸವಲ್ಲ. ಇಲ್ಲಿ ನೆಲೆಸಿರುವ ಪ್ರತಿಯೊಬ್ಬರ ಜವಾಬ್ದಾರಿ’ ಎಂದರು.
‘ಒಣ ಕಸ, ಹಸಿ ಕಸವನ್ನು ಮನೆಗಳಲ್ಲಿಯೇ ಬೇರ್ಪಡಿಸಿದಾಗ, ನಿರ್ವಹಣೆ ಸುಲಭವಾಗುತ್ತದೆ. ಶಾಲಾ ಮಕ್ಕಳು ಅಪ್ಪ–ಅಮ್ಮಂದಿರಿಗೆ ಕಸ ಬೇರ್ಪಡಿಸುವ ಬಗ್ಗೆ ತಿಳಿವಳಿಕೆ ನೀಡಬೇಕು. ನಗರದೆಲ್ಲೆಡೆ ಬಿಬಿಎಂಪಿ ವತಿಯಿಂದಲೂ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನಾಗರಿಕರು ಇದಕ್ಕೆ ಕೈಜೋಡಿಸಬೇಕು’ ಎಂದು ಹೇಳಿದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ವಚ್ಚತಾ ಘೋಷಣೆಗಳ ಭಿತ್ತಿಫಲಕಗಳನ್ನು ಹಿಡಿದು, ಮನೆ ಮನೆಗೆ ತೆರಳಿ ಜನರದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.
ಅಭಿಯಾನದಲ್ಲಿ ಪಾಲಿಕೆ ಸದಸ್ಯರಾದ ಜಿ.ಮಂಜುನಾಥ್, ಮಂಜುನಾಥ್ ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್, ಕೆಪಿಸಿಸಿ ಮಹಿಳಾ ಘಟಕದ ಮುಖ್ಯಸ್ಥೆ ಸೌಮ್ಯರೆಡ್ಡಿ, ವಿದ್ಯಾರ್ಥಿಗಳ ಜತೆ ಹೆಜ್ಜೆ ಹಾಕಿದರು. ಪೌರ ಕಾರ್ಮಿಕರಿಗೆ ಕೈಗವಚ, ಮುಖಗವಸುಗಳನ್ನು ವಿತರಿಸಿದರು.