ಶಾಲೆ, ಮನೆ, ಆಟದಲ್ಲೇ ಮಕ್ಕಳ ಮನಸ್ಸು ಗಿರಕಿ ಹೊಡೆಯುವ ಬದಲು ಹೊರಗಿನ ಪ್ರಪಂಚದ ಅರಿವೂ ಅವರಿಗೆ ಆಗಬೇಕು ಎಂಬುದು ನನ್ನ ಉದ್ದೇಶ. ಆದ್ದರಿಂದ ಪ್ರತಿ ಆರು ತಿಂಗಳಿಗೊಮ್ಮೆ ಅವರನ್ನು ಹೊರಗೆ ಎಲ್ಲಾದರೂ ಕರೆದುಕೊಂಡು ಹೋಗುತ್ತಿರುತ್ತೇನೆ.
ಅವರಿಗೆ ಇಡೀ ಪ್ರಪಂಚ ತೋರಿಸಬೇಕು ಎಂಬ ಆಸೆ ನನ್ನದು. ಅದಕ್ಕೆ ಇಂಥ ಜಾಗ ಎಂತಲೇ ಇಲ್ಲ. ಯಾವ ಜಾಗವಾದರೂ ಸರಿ - ವಿಶೇಷ ಎಂದು ಅನ್ನಿಸಿದರೆ, ರಜೆ ಬಂದಾಗ ಕರೆದುಕೊಂಡು ಹೋಗುತ್ತೇನೆ.
ನಮಗೆ ಆಗ ಬೆಂಗಳೂರೇ ದೊಡ್ಡದು. ಕಾಲೇಜು ದಿನಗಳಲ್ಲಿ ಬೆಂಗಳೂರಿಗೆ ಬಂದು ಬ್ರಿಗೇಡ್ ರೋಡ್ ಸುತ್ತಿದರೆ ಅದೇ ದೊಡ್ಡ ವಿಷಯ. ಈಗ ಹಾಗಿಲ್ಲ. ಮಕ್ಕಳಿಗೆ ಸಾಕಷ್ಟು ಅವಕಾಶ, ಎಕ್ಸ್ಪೋಷರ್ ಇದೆ. ಇಂದಿನ ತಂತ್ರಜ್ಞಾನವೂ ಹಾಗೇ ಇದೆ.
ನನ್ನ ಮಗಳನ್ನು ಎಲ್ಲಿಗೆ ಕರೆದುಕೊಂಡು ಹೋದರೂ, ‘ಪಪ್ಪಾ ಬೆಂಗಳೂರು, ಮಂಗಳೂರೇ ಚೆಂದ ಅಲ್ವಾ’ ಎಂದು ಕೇಳುತ್ತಾಳೆ. ನನಗೆ ಅನ್ನಿಸಿದ್ದೇ ನನ್ನ ಮಗಳಿಗೆ ಅನ್ನಿಸುತ್ತಿದೆ.
ವಿಹಾನ್ ಚಿಕ್ಕವನು. ಅವನಿಗಿನ್ನೂ 2 ವರ್ಷ. ಚಾರಿತ್ರ್ಯ ನನ್ನ ಜೊತೆ ಎಲ್ಲಾ ಕಡೆ ಸುತ್ತಿದ್ದಾಳೆ. ನಾನೆಲ್ಲಿ ಹೋದರೂ ಕರೆದುಕೊಂಡು ಹೋಗುತ್ತೇನೆ, ಪ್ರತಿ ವರ್ಷ ಎರಡು ಟ್ರಿಪ್ ತಪ್ಪುವುದಿಲ್ಲ. ಇತ್ತೀಚೆಗ ಮಗ ವಿಹಾನ್ ಕೂಡ ನಮ್ಮ ಅಲೆದಾಟಕ್ಕೆ ಜೊತೆಯಾಗಿದ್ದಾನೆ.
ಸಿಂಗಪುರ, ಮಲೇಷ್ಯಾ, ದುಬೈ, ಲಂಡನ್, ಯುರೋಪ್ ಟ್ರಿಪ್ ಮುಗಿಸಿದ್ದೇವೆ. ಶ್ರೀಲಂಕಾಗೆ ಕರೆದುಕೊಂಡು ಹೋಗಬೇಕು ಅನ್ನಿಸಿತ್ತು. ಅಲ್ಲಿಗೂ ಇತ್ತೀಚೆಗಷ್ಟೇ ಹೋಗಿ ಬಂದೆವು. ಮಕ್ಕಳಿಗೆ ತುಂಬಾ ಖುಷಿಯಾಗಿತ್ತು.
ಎಲ್ಲಿಗೇ ಕರೆದುಕೊಂಡು ಹೋದರೂ ಸಾವಿರ ಪ್ರಶ್ನೆಗಳನ್ನು ಕೇಳುತ್ತಾರೆ. ಕೇಳಿದ್ದನ್ನೇ ಮತ್ತೆ ಮತ್ತೆ ಕೇಳುತ್ತಿರುತ್ತಾರೆ. ಅದಕ್ಕೆ ಉತ್ತರಿಸಲು ತಾಳ್ಮೆ ಇರಬೇಕು. ಮಕ್ಕಳಿಗೆ ಸಮಯ ಮೀಸಲಿಡಲೆಂದೇ ಪ್ರವಾಸಕ್ಕೆ ಹೋಗುವುದರಿಂದ ಅವರು ಏನೇ ಕೇಳಿದರೂ ಖುಷಿಯಿಂದ ಹೇಳಬೇಕು.
ಇಂಥದ್ದೇ ಸ್ಥಳಕ್ಕೆ ಹೋಗಬೇಕು ಎಂದೇನೂ ನಾನು ಪರಿಧಿ ಹಾಕಿಕೊಂಡಿಲ್ಲ. ಹೋಗಬೇಕು ಅನ್ನಿಸಿದ ಕಡೆಯೆಲ್ಲಾ ಮಕ್ಕಳನ್ನೂ ಕರೆದುಕೊಂಡು ಹೋಗುತ್ತೇನೆ. ನೀವೂ ಅಷ್ಟೆ. ಮಕ್ಕಳಿಗೆ ಎಲ್ಲಿ ಖುಷಿ ಸಿಗುತ್ತದೆ ಎಂದು ನಿಮಗೆ ಅನ್ನಿಸುತ್ತದೋ ಅಲ್ಲಿಗೆಲ್ಲಾ ಕರೆದುಕೊಂಡು ಹೋಗಿ.