ಗದಗ: ಗದಗ–ಬೆಟಗೇರಿ ಅವಳಿ ನಗರದ ಸಾರ್ವಜನಿಕ ಮೂತ್ರಾಲಯಗಳಿಗೆ ಈಗ ಸ್ಚಚ್ಛತೆಯ ಭಾಗ್ಯ ಕೂಡಿ ಬಂದಿದೆ. ನಗರದ ಮೂತ್ರಾಲಯಗಳ ದುಸ್ಥಿತಿ ನಿವಾರಣೆಗೆ ನಗರಸಭೆಯ ಬಿಜೆಪಿ ಸದಸ್ಯರು ಸ್ವಚ್ಛ ಭಾರತ ಅಭಿಯಾನದಡಿ ವಿಶೇಷ ಯೋಜನೆ ರೂಪಿಸಿದ್ದಾರೆ. ಈ ಮೂಲಕ ಶೌಚಾಲಯಗಳ ಸ್ವಚ್ಛತೆ ಹಾಗೂ ಸೌಂದರ್ಯ ವೃದ್ಧಿಗೆ ಮುಂದಾಗಿದ್ದಾರೆ.
ಬಿಜೆಪಿ ಮುಖಂಡ ನಾಗಲಿಂಗ ಐಲಿ, ಅರವಿಂದ ಹುಲ್ಲೂರು, ಗಿರೀಶ ಕಾರಬಾರಿ, ಮಂಜುನಾಥ ಮೇಗೇರಿ ಹಾಗೂ ಸದಾನಂದ ಮೇರವಾಡೆ ತಂಡದಲ್ಲಿದ್ದು, 10ಕ್ಕೂ ಹೆಚ್ಚು ಮೂತ್ರಾಲಯ ಸ್ವಚ್ಛಗೊಳಿಸಿ, ಬಣ್ಣ ಬಳಿದಿದ್ದಾರೆ.
ಮೂತ್ರಾಲಯಗಳ ಗೋಡೆಗಳಿಗೆ ‘ಸ್ವಚ್ಛ ಭಾರತ’ದ ಸಂಕೇತವಾದ ಗಾಂಧೀಜಿ ಅವರ ಕನ್ನಡಕದ ಚಿತ್ರ, ‘ಸ್ವಚ್ಛತೆಯೆಡೆಗೆ ಒಂದು ಹೆಜ್ಜೆ’, ‘ಸಾರ್ವ ಜನಿಕ ಮೂತ್ರಾಲಯಗಳು ನಿಮ್ಮ ಆಸ್ತಿ’ ಎಂಬ ಘೋಷವಾಕ್ಯಗಳನ್ನು ಬರೆದು ಜನಜಾಗೃತಿಗೂ ಒತ್ತು ನೀಡಿದ್ದಾರೆ. ಈ ಕಾರ್ಯಕ್ಕೆ ಜನರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.
ನಗರದಲ್ಲಿ ಸುಮಾರು 30 ಮೂತ್ರಾಲಯಗಳಿದ್ದವು. ಸ್ಥಳೀಯ ಸಂಗೊಳ್ಳಿ ರಾಯಣ್ಣ ವೃತ್ತ, ರೋಟರಿ ವೃತ್ತ ಸೇರಿ ವಿವಿಧ ಕಡೆಗಳಲ್ಲಿ ಇದ್ದ ಮೂತ್ರಾಲಯಗಳನ್ನು ನಗರಸಭೆಯಿಂದ ನೆಲ ಸಮಗೊಳಿಸಲಾಗಿತ್ತು. ಸದ್ಯ ಮೂತ್ರಾಲಯಗಳ ಸಂಖ್ಯೆ 20ಕ್ಕಿಂತ ಕಡಿಮೆ ಇವೆ.
ವಿವಿಧ ಕಾರ್ಯಗಳಿಗಾಗಿ ನಗರಕ್ಕೆ ಬರುವ ಜನರು ನೈಸರ್ಗಿಕ ಬಾಧೆ ತೀರಿಸಿಕೊಳ್ಳಲು ಪರದಾಡುತ್ತಿದ್ದಾರೆ. ಕೆಲವೆಡೆ ಮೂತ್ರಾಲಗಳಿದ್ದರೂ, ನಿರ್ವಹಣೆ ಇಲ್ಲದಂತಾಗಿದೆ. ಇದನ್ನು ಗಮನಿ ಸಿದ ಬಿಜೆಪಿ ಕಾರ್ಯಕರ್ತರು ಕಳೆದ ಗಾಂಧಿ ಜಯಂತಿ ದಿನದಿಂದ ಶೌಚಾಲಯ ಹಾಗೂ ಮೂತ್ರಾಲಯಗಳ ಸ್ವಚ್ಛತಾ ಅಭಿಯಾನ ಆರಂಭಿಸಿದ್ದಾರೆ. ಈಗಾಗಲೇ ಪಾಲಾ ಬದಾಮಿ ರಸ್ತೆ (ಗಾಂಧಿ ವೃತ್ತ) ಹಾಗೂ ಸ್ಟೇಷನ್ ರಸ್ತೆಯಲ್ಲಿರುವ ಮೂತ್ರಾಲಯಗಳನ್ನು ಸ್ವಚ್ಛಗೊಳಿಸಿದ್ದಾರೆ. ಸ್ವಂತ ಹಣದಿಂದ ಸುಣ್ಣ–ಬಣ್ಣ ಬಳಿದಿದ್ದಾರೆ.
9ನೇ ವಾರ್ಡ್ನಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮೇಘಾ ಮುದಗಲ್ ಅವರು, ಎಸ್ಎಫ್ಸಿ ಅನುದಾನದಡಿ ಹೆಲ್ತ್ಕ್ಯಾಂಪ್ನ ಸಹಸ್ರಾರ್ಜುನ ವೃತ್ತ ಹಾಗೂ ರೈಲ್ವೆ ನಿಲ್ದಾಣ ಮಾರ್ಗದಲ್ಲಿ ತಲಾ ಒಂದು ಶೌಚಾಲಯ ನಿರ್ಮಿಸಿದ್ದಾರೆ. ಅವುಗಳಿಗೆ ಆಕರ್ಷಕ ಟೈಲ್ಸ್ ಅಳವಡಿಸಲಾಗಿದೆ.
‘ನಗರದಲ್ಲಿರುವ ಎಲ್ಲ ಮೂತ್ರಾಲಯ ಹಾಗೂ ಸಮುದಾಯ ಶೌಚಾಲಯಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ಸ್ವಚ್ಛತೆ ಕುರಿತು ಜನರಲ್ಲಿ ಅರಿವು ಮೂಡಿಸಲಾಗುವುದು. ಈಗಾಗಲೇ ಕೆಲವು ಮೂತ್ರಾಲಯಗಳನ್ನು ಸ್ವಚ್ಛಗೊಳಿಸಿ ದ್ದೇವೆ. ಸ್ವಂತ ಖರ್ಚಿನಲ್ಲೇ ಅವುಗಳಿಗೆ ಬಣ್ಣ ಬಳಿದಿದ್ದೇವೆ. ಈ ಕಾರ್ಯದಿಂದ ಖುಷಿಯಾಗಿದೆ’ ಎನ್ನುತ್ತಾರೆ ಬಿಜೆಪಿ ಮುಖಂಡ ಅರವಿಂದ ಹುಲ್ಲೂರ.
ಬಿಜೆಪಿ ಕಾರ್ಯಕರ್ತರಿಂದ ನಡೆಯುತ್ತಿರುವ ಸಾರ್ವಜನಿಕ ಶೌಚಾಲಯಗಳ ಸ್ವಚ್ಛತಾ ಕಾರ್ಯಕ್ಕೆ ನಗರಸಭೆ, ಸಂಘ, ಸಂಸ್ಥೆಗಳು ಕೈಜೋಡಿಸಬೇಕು
ಜಿ.ಎಸ್.ರಮೇಶ
ಗದಗ ನಿವಾಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.