ವಿಜಯಪುರ: ಹಿಂಗಾರು–ಬೇಸಿಗೆ ಹಂಗಾಮಿನಲ್ಲಿ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು, ಈ ಯೋಜನೆಯನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆ ಎಂದು ಅನುಷ್ಠಾನಗೊಳಿಸಲಾಗುತ್ತಿದೆ.
ಹಿಂಗಾರು ಹಂಗಾಮಿನ ಅಧಿಸೂಚಿತ ಬೆಳೆಗಳಾದ ಮುಸುಕಿನ ಜೋಳ (ನೀರಾವರಿ), ಕಡಲೆ (ನೀ), ಕಡಲೆ (ಮಳೆ ಆಶ್ರಿತ), ಗೋಧಿ (ನೀ), ಈರುಳ್ಳಿ (ನೀ), ಹಾಗೂ ಬೇಸಿಗೆ ಹಂಗಾಮಿಗಾಗಿ ಶೇಂಗಾ (ನೀ), ಸೂರ್ಯಕಾಂತಿ (ನೀ), ಈರುಳ್ಳಿ (ನೀ) ಬೆಳೆಗಳನ್ನು ಬೆಳೆಯುವ ರೈತರು ಈ ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ಬೆಳೆ ಸಾಲ ಪಡೆದ ರೈತರಿಗೆ ಈ ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳಲು ಆಯ್ಕೆ ಅವಕಾಶವಿದೆ. ಆದರೆ ಅಧಿಸೂಚಿತ ಬೆಳೆಗಳಿಗೆ ಬೆಳೆ ಸಾಲ ಪಡೆಯುವ ರೈತರನ್ನು ಕಡ್ಡಾಯವಾಗಿ ಬೆಳೆ ವಿಮೆಗೆ ಒಳಪಡಿಸಲಾಗುವುದು.
ಸಾಲ ಪಡೆಯದ ರೈತರು ವಿಮಾ ಕಂತಿನ ಹಣವನ್ನು ಪ್ರಸ್ತಾವನೆಗಳೊಂದಿಗೆ ಬ್ಯಾಂಕ್ಗಳಿಗೆ ಸಲ್ಲಿಸುವಾಗ ಆಧಾರ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು. ಆಯಾ ಬ್ಯಾಂಕಿನಲ್ಲಿ ಖಾತೆ ಹೊಂದಿರಬೇಕು. ವಿಮಾ ಮೊತ್ತವು ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಗೆ ಒಂದೇ ಆಗಿರುತ್ತದೆ. ಈ ಯೋಜನೆಯಡಿ ಇಫ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪೆನಿಯನ್ನು ಜಿಲ್ಲೆಗೆ ಅಧಿಕೃತ ವಿಮಾ ಸಂಸ್ಥೆಯಾಗಿ ಸರ್ಕಾರ ನೇಮಿಸಿದೆ.
ಸಾಲ ಪಡೆದ ರೈತರು ಈ ಯೋಜನೆಯಲ್ಲಿ ನೋಂದಾಯಿಸುವುದು ಕಡ್ಡಾಯ. ಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿರುತ್ತದೆ. ಹಿಂಗಾರಿ ಹಂಗಾಮಿನ ಬೆಳೆಗಳಿಗೆ ಶೇ 1.5 ವಿಮಾ ಕಂತನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೋಂದಾಯಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಮನವಿ ಮಾಡಿಕೊಂಡಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಮಂಜುನಾಥ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.