ಹಿರೇಕೆರೂರ: ‘ಬಗರ್ ಹುಕುಂ ಅಕ್ರಮ ಸಾಗುವಳಿದಾರರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ, ಇದೇ 4ರಂದು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತೇವೆ’ ಎಂದು ಉತ್ತರ ಕರ್ನಾಟಕ ಅನ್ನದಾತರ ಸೇನೆ ರಾಜ್ಯ ಸಂಚಾಲಕ ಹನುಮಂತಪ್ಪ ದೀವಿಗಿಹಳ್ಳಿ ಹೇಳಿದರು.
ಬಗರ್ ಹುಕುಂ ಸಾಗುವಳಿ ಮಾಡಿದ ರೈತರಿಗೆ ಪಟ್ಟಾ ನೀಡುವಂತೆ ನವೆಂಬರ್ 20ರಂದು ಜಿಲ್ಲಾಡಳಿತ ಭವನದ ಎದುರು ಉತ್ತರ ಕರ್ನಾಟಕ ಅನ್ನದಾತರ ಸೇನೆ ಕಪ್ಪು ಬಟ್ಟೆ ಪ್ರದರ್ಶಿಸಿತ್ತು. ನಮ್ಮನ್ನು ಭೇಟಿ ಮಾಡಿದ್ದ ಅಧಿಕಾರಿಗಳು ಸಾಗುವಳಿದಾರರಿಗೆ ಹಕ್ಕುಪತ್ರ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಕೆಲಸ ಮಾತ್ರ ಮಾಡಿಲ್ಲ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ತಾಲ್ಲೂಕಿನ ತಹಶೀಲ್ದಾರರು, ಅರಣ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿಂದಾಗಿ ವರಹ, ಆಲದಗೇರಿ ಹಾಗೂ ಬಾವಾಪುರ ಗ್ರಾಮಗಳ ಸಾಗುವಳಿದಾರರಿಗೆ ಹಕ್ಕುಪತ್ರ ಸಿಗುತ್ತಿಲ್ಲ ಎಂದು ಹೇಳಿದರು.
4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟಣಕ್ಕೆ ಬರುತ್ತಿದ್ದಾರೆ. ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ಹತ್ತಿ ಮತ್ತು ಗೋವಿನಜೋಳ ಬೆಂಬಲ ಬೆಲೆ ನಿಗದಿಪಡಿಸುವುದು ಸೇರಿದಂತೆ, ಜಿಲ್ಲೆಯ ಸಮಸ್ಯೆಗಳ ಕುರಿತು ಅವರ ಗಮನ ಸೆಳೆಯಲಾಗುವುದು ಎಂದರು.
ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೂದಿಹಳ್ಳಿ, ಮಂಜಯ್ಯ ಮಠದ, ಸಿದ್ದಪ್ಪ ನೂಲಗೇರಿ, ಜಗದೀಶ ಕುಸಗೂರ, ಚಂದ್ರು ಮತ್ತೂರ, ಬಸಪ್ಪ ಲಗುಬಗಿ, ತಾವರೆಪ್ಪ ಮೂಡಿ ಹಾಗೂ ಮಹೇಶಪ್ಪ ಪುಟ್ಟಪ್ಪನವರ ಇದ್ದರು.