ಲಖನೌ: ರೈಲು ಹಳಿಗೆ ಅಳವಡಿಸುವ ಪ್ಯಾಂಡ್ರೋಲ್ ಕ್ಲಿಪ್ಗಳು ನಾಪತ್ತೆಯಾದ ಪ್ರಕರಣದ ತನಿಖೆಗೆ ಸಹಕರಿಸುವಂತೆ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಸುಲ್ಖನ್ ಸಿಂಗ್ ಅವರು ಭಯೋತ್ಪಾದನಾ ನಿಗ್ರಹ ಪಡೆಗೆ ಆದೇಶಿಸಿದ್ದಾರೆ.
ರೈಲಿನ ಹಳಿಗಳು ದೃಢವಾಗಿ ಕಚ್ಚಿಕೊಂಡು ನಿಲ್ಲಲು ಕಾಂಕ್ರೀಟ್ ಸ್ಲೀಪರ್ಗಳಿಗೆ ಜೋಡಿಸುವ ಕ್ಲಿಪ್ಗಳನ್ನು ಪ್ಯಾಂಡ್ರೋಲ್ ಕ್ಲಿಪ್ ಎಂದು ಕರೆಯಲಾಗುತ್ತದೆ.
ಉತ್ತರ ಪ್ರದೇಶದ ಬಾದ್ಶಾಹ ನಗರ ಮತ್ತು ದಲಿಗಂಜ್ ರೈಲು ನಿಲ್ದಾಣಗಳ ನಡುವೆ ಭಾನುವಾರ ಕೈಫಿಯತ್ ಎಕ್ಸ್ಪ್ರೆಸ್ ರೈಲು ಸಂಚರಿಸುವ ಮುನ್ನ 77 ಪ್ಯಾಂಡ್ರೋಲ್ ಕ್ಲಿಪ್ಗಳು ನಾಪತ್ತೆಯಾಗಿದ್ದವು. ಇದರಿಂದಾಗಿ ಅಜಮ್ಗಡದಿಂದ ದೆಹಲಿಗೆ ಹೊರಟಿದ್ದ ರೈಲನ್ನು ನಾಲ್ಕು ತಾಸುಗಳ ಕಾಲ ತಡೆಯಲಾಗಿತ್ತು.
‘ಕ್ಲಿಪ್ಗಳು ಇಲ್ಲದಿರುವುದು ಸೂಕ್ತ ಸಮಯದಲ್ಲಿ ಪತ್ತೆಯಾಗಿದ್ದರಿಂದ ಭಾರಿ ಅನಾಹುತ ತಪ್ಪಿದೆ’ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.