ರಬಕವಿ ಬನಹಟ್ಟಿ: ‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಹತ್ತಿಕ್ಕುವ ಕಾರ್ಯವನ್ನು ಮಾಡುತ್ತಿದೆ’ ಎಂದು ನಂದು ಗಾಯಕವಾಡ ತಿಳಿಸಿದರು. ಅವರು ಸೋಮವಾರ ಪಟ್ಟಣದಲ್ಲಿ ಸಂಸದ ಪ್ರತಾಪ ಸಿಂಹ ಅವರ ಬಂಧನವನ್ನು ಖಂಡಿಸಿ ಕೈಗೊಂಡ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.
‘ನಾಲ್ಕೂವರೆ ವರ್ಷಗಳಲ್ಲಿ ಹತ್ತೊಂಬತ್ತಕ್ಕೂ ಹೆಚ್ಚು ಹಿಂದೂ ಮುಖಂಡರ ಹತ್ಯೆ ನಡೆದಿದೆ. ಅವುಗಳ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿದೆ’ ಎಂದು ಆರೋಪಿಸಿದರು.
ರವಿ ಜವಳಗಿ ಹಾಗೂ ರಘು ಹತ್ತೆನ್ನವರ ಮಾತನಾಡಿ, ‘ಭಾರತದ ನೆಲದಲ್ಲಿ ಅದೂ ಹುಬ್ಬಳ್ಳಿಯಲ್ಲಿ ಮೌಲ್ವಿಯೊಬ್ಬರು ದೇಶ ವಿರೋಧಿ ಮಾತುಗಳನ್ನು ಹೇಳಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಪೇಟೆ ಭಾಗದ ಮಾರುತಿ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ರ್ಯಾಲಿ ಪ್ರಮುಖ ಬೀದಿಗಳಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ತೇರದಾಳ ಯುವ ಮೋರ್ಚಾ ಘಟಕದ ಅಧ್ಯಕ್ಷ ಸದಾಶಿವ ಹೊಸಮನಿ, ರಾಜು ಟೆಂಗಿನಕಾಯಿ, ಈಶ್ವರ ಕಾಡದೇವರ, ಸಿದ್ದು ಅಮ್ಮಣಗಿ, ಕೃಷ್ಣಾ ಲಾಳಕಿ, ಕರೆಪ್ಪ ಮುಗಳಖೋಡ, ಬಸವರಾಜ ಬಾಳಿಕಾಯಿ, ಸುರೇಶ ಅಕಿವಾಟ, ಮಹಾವೀರ ಭಿಲವಡಿ, ಪ್ರಕಾಶ ಮಾನಶೆಟ್ಟಿ ಸೇರಿದಂತೆ ಅನೇಕರು ಇದ್ದರು.