ಶ್ರೀರಂಗಪಟ್ಟಣ: ‘ತಾಲ್ಲೂಕಿನ ಕೊತ್ತತ್ತಿ ಸೇರಿ ಇನ್ನಿತರ 47 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ರೂ 60 ಕೋಟಿ ವೆಚ್ಚದ ಯೋಜನೆ ಸೇರಿ ಒಟ್ಟು ರೂ. 106 ಕೋಟಿ ವೆಚ್ಚದಲ್ಲಿ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಶುದ್ಧ ನೀರು ಪೂರೈಸುವ ಯೋಜನೆಯ ಪ್ರಸ್ತಾವ ಸಲ್ಲಿಸಿದ್ದು, ಅದು ಕ್ಯಾಬಿನೆಟ್ ಮುಂದಿದೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ತಾಲ್ಲೂಕಿನ ಮಹದೇವಪುರ ಗ್ರಾಮದಲ್ಲಿ ಬುಧವಾರ ನಡೆದ ‘ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಹದೇವಪುರ ಆಸುಪಾಸಿನ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ರೂ.24 ಕೋಟಿ ವೆಚ್ಚದ ಯೋಜನೆ ಸಿದ್ದವಾಗಿದೆ. ಕೆ.ಶೆಟ್ಟಹಳ್ಳಿ ಇತರ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ರೂ.22 ಕೋಟಿ ವೆಚ್ಚದ ಯೋಜನೆ ಸಿದ್ದಪಡಿಸಿದ್ದು ಅದೂ ಕೂಡ ಕ್ಯಾಬಿನೆಟ್ ಮಂಜೂರಾತಿಗಾಗಿ ಕಾದಿದೆ. ಅನುಮೋದನೆ ಸಿಕ್ಕ ಕೂಡಲೇ ಕಾಮಗಾರಿ ಆರಂಭವಾಗಲಿದೆ’ ಎಂದು ಹೇಳಿದರು.
ಗ್ರಾಮಸ್ಥರ ಪ್ರಶ್ನೆ: ‘ಮಹದೇವಪುರ ಗ್ರಾಮದಲ್ಲಿ ಕಳೆದ 5 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಕಾವೇರಿ ನದಿಯ ದಡದಲ್ಲಿದ್ದರೂ ಕುಡಿಯಲು ನೀರಿಲ್ಲದೆ ಬವಣೆಪಡುತ್ತಿದ್ದೇವೆ. ಊರಿಗೆ ಬಂದಾಗಲೆಲ್ಲ ಇದೇ ಸಬೂಬು ಹೇಳುತ್ತಿದ್ದೀರಿ’ ಎಂದು ಗ್ರಾಮದ ಯುವಕರು ಶಾಸಕರ ಎದುರು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಮೇಶ ಬಂಡಿಸಿದ್ದೇಗೌಡ, ‘ಇದು ದೊಡ್ಡ ಯೋಜನೆಯಾಗಿದ್ದು ತಿಂಗಳಾಂತ್ಯಕ್ಕೆ ಕ್ಯಾಬಿನೆಟ್ ಒಪ್ಪಿಗೆ ಸಿಗುವ ಸಂಭವವಿದೆ. ಶೀಘ್ರ ಕೆಲಸ ಆರಂಭವಾಗಲಿದೆ’ ಎಂದು ಸಮಾಧಾನಪಡಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ. ಶರತ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್. ಕಾಳೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್, ಎನ್ಆರ್ಎಲ್ಎಂ ಯೋಜನೆ ತಾಲ್ಲೂಕು ಸಂಯೋಜಕ ಜೆ. ನಂಜುಂಡಯ್ಯ ಇದ್ದರು.