ನವದೆಹಲಿ: ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರ ರೈತ ವಿರೋಧಿ ಧೋರಣೆಯನ್ನು ಹೊಂದಿದೆ ಎಂದು ಖಂಡಿಸಿ ಮಹಾರಾಷ್ಟ್ರದ ಬಿಜೆಪಿ ಸಂಸದ ನಾನಾ ಪೆಟೋಲ್ ಶುಕ್ರವಾರ ಸಂಸದ ಸ್ಥಾನ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.
ಕೇಸರಿ ಪಾಳಯ ತೊರೆದಿರುವ ನಾನಾ, ಕಾಂಗ್ರೆಸ್ ಸೇರಿ ರಾಹುಲ್ ಗಾಂಧಿಯವರೊಂದಿಗೆ ಇದೇ 11ರಂದು ಅಹಮದಾಬಾದ್ನಲ್ಲಿ ನಡೆಯಲಿರುವ ಜಾಥಾದಲ್ಲಿ ಭಾಗವಹಿಸಲಿದ್ದಾರೆ.
2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರಿದ್ದ ನಾನಾ ಭಂಡಾರಾ-ಗೊಂಡಿಯಾ ಕ್ಷೇತ್ರದಿಂದ ಸ್ಪರ್ಧಿಸಿ ಎನ್ಸಿಪಿಯ ಪ್ರಫುಲ್ ಪಟೇಲ್ ಅವರನ್ನು ಸೋಲಿಸಿದ್ದರು. ಬಿಜೆಪಿ ಸೇರುವುದಕ್ಕೂ ಮೊದಲು ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳಲ್ಲಿ ಪೆಟೋಲ್ ಇದ್ದರು.
ರೈತರ ಸಮಸ್ಯೆ ಸೇರಿದಂತೆ ಹಲವಾರು ವಿವಾದಿತ ವಿಚಾರಗಳ ಬಗ್ಗೆ ಮಹಾರಾಷ್ಟ್ರ ಸರ್ಕಾರದ ನಿಲುವನ್ನು ಪೆಟೋಲ್ ಪ್ರಶ್ನಿಸುತ್ತಿದ್ದರು.
ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ನೀಡಿರುವ ರಾಜೀನಾಮೆ ಪತ್ರದಲ್ಲಿ ರೈತ ಸಮಸ್ಯೆ, ಆರ್ಥಿಕ ಸ್ವರೂಪ, ನಿರುದ್ಯೋಗ ಒಟ್ಟಾರೆ 14 ವಿಷಯಗಳನ್ನು ಪ್ರಸ್ತಾಪಿಸಿರುವ ನಾನಾ, ಈ ಎಲ್ಲಾ ಕಾರಣದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
‘ಮಹಾರಾಷ್ಟ್ರ ಸರ್ಕಾರದ ನಡವಳಿಕೆ ಹಾಗೂ ಈ ಎಲ್ಲಾ ವಿಚಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಗಮನಕ್ಕೂ ತಂದಿದ್ದೆ, ಆದರೆ ಅವರೂ ಏನು ಮಾಡದೆ ನಿರ್ಲಕ್ಷಿಸಿದ್ದಾರೆ’ ಎಂದು ನಾನಾ ಆರೋಪಿಸಿದ್ದಾರೆ.