ಬೆಂಗಳೂರು: ‘ಹವ್ಯಕ ದಂಪತಿ ಒಂದೇ ಮಗು ಸಾಕು ಎಂಬ ಧೋರಣೆಯನ್ನು ಹೊಂದುವುದು ಸರಿಯಲ್ಲ. ಇದರಿಂದ ಕಾಲಕ್ರಮೇಣ ಹವ್ಯಕ ಸಮುದಾಯವೇ ನಶಿಸಿಹೋಗುವ ಸಾಧ್ಯತೆ ಇದೆ' ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ಹವ್ಯಕ ಮಹಾಸಭಾ ವತಿಯಿಂದ ಮಲ್ಲೇಶ್ವರದಲ್ಲಿ ನಿರ್ಮಿಸಿರುವ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಹವ್ಯಕರಲ್ಲಿ ಅಂತರ್ಜಾತಿ ವಿವಾಹ ಹೆಚ್ಚುತ್ತಿದ್ದು, ಇದು ಕುಟುಂಬ ವಿಘಟನೆಗೂ ಕಾರಣವಾಗುತ್ತಿದೆ. ಇವನ್ನೆಲ್ಲ ಹತೋಟಿಗೆ ತರಬೇಕಾದ್ದದ್ದು ಸಂಘಟನೆಗಳ ಕರ್ತವ್ಯ. ಈ ಬಗ್ಗೆ ಮಹಾಸಭಾ ಹೆಚ್ಚು ಕಾಳಜಿ ವಹಿಸಬೇಕು’ ಎಂದು ಸಲಹೆ ನೀಡಿದರು.
‘ಹವ್ಯಕರ ಮನೆಗಳಲ್ಲಿ ಪಂಚ ಯಜ್ಞಗಳು ನಡೆಯುತ್ತಿದ್ದವು. ಈಗ ಪೂಜೆ ಮತ್ತು ಸಂಧ್ಯೋಪಾಸನೆಯಷ್ಟೇ ಉಳಿದಿದೆ. ಕನಿಷ್ಠಪಕ್ಷ ಗೀತಾಧ್ಯಯನ ಮತ್ತು ಪ್ರಾಣಾಯಾಮವನ್ನಾದರೂ ತಪಸ್ಸಿನಂತೆ ಮಾಡಬೇಕು. ಹವ್ಯಕ ಮಹಾಸಭಾದಲ್ಲಿ ಗೀತಾ ಪಾರಾಯಣವನ್ನು ನಿರಂತರವಾಗಿ ನಡೆಸಬೇಕು’ ಎಂದು ಸಲಹೆ ನೀಡಿದರು.
‘ಕಮಂಡಲವನ್ನು ಪ್ರತಿದಿನ ತೊಳೆಯದಿದ್ದರೆ ಒಳಗೆ ಪಾಚಿ ಕಟ್ಟುತ್ತದೆ. ಮನಸ್ಸು ಕೂಡಾ ಹಾಗೆಯೇ. ಅದನ್ನು ಉತ್ತಮ ಸಂಸ್ಕಾರಗಳ ಮೂಲಕ ಸ್ವಚ್ಛಗೊಳಿಸುತ್ತಿರಬೇಕು’ ಎಂದರು.
ಮಹಾಸಭಾ ಕೈಗೊಂಡಿರುವ ಸಸ್ಯ ಮತ್ತು ಗೀತೆ ರಕ್ಷಣೆ ಅಭಿಯಾನ ಹಾಗೂ ಹವ್ಯಕ ವಿಶ್ವಸಮ್ಮೇಳನ ಕುರಿತು ಅಧ್ಯಕ್ಷ ಡಾ.ಗಿರಿಧರ್ ಕಜೆ ಮಾಹಿತಿ ನೀಡಿದರು.