ಬೆಂಗಳೂರು: ಇಂಡಿಯನ್ ವ್ಹೀಲ್ಚೇರ್ ಟೆನಿಸ್ ಟೂರ್ ಟೆಬೆಬುಯಿಯಾ ಓಪನ್ ಟೆನಿಸ್ ಚಾಂಪಿಯನ್ಷಿಪ್ ಡಿಸೆಂಬರ್ 14ರಿಂದ 17ರವರೆಗೆ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್ಎಲ್ಟಿಎ) ಅಂಗಳದಲ್ಲಿ ನಡೆಯಲಿದೆ.
ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಅಥ್ಲೀಟ್ ರೀತ್ ಅಬ್ರಾಹಂ ಟ್ರೋಫಿ ಅನಾವರಣ ಮಾಡಿದರು.
ಕರ್ನಾಟಕ, ನವದೆಹಲಿ, ಕೋಯಮತ್ತೂರು, ಚೆನ್ನೈ ಮತ್ತು ಮುಂಬೈನ ಒಟ್ಟು 42 ಮಂದಿ ಕ್ರೀಡಾಪಟುಗಳು ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಇದರಲ್ಲಿ ಆರು ಮಂದಿ ಮಹಿಳೆಯರು ಮತ್ತು 36 ಮಂದಿ ಪುರುಷರು ಸೇರಿದ್ದಾರೆ.
ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗಗಳಲ್ಲಿ ಸ್ಪರ್ಧೆಗಳು ಆಯೋಜನೆಯಾಗಿವೆ. ಡಿಸೆಂಬರ್ 13ರ ಬುಧವಾರ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಇದರಲ್ಲಿ ಗೆದ್ದ ಎಂಟು ಮಂದಿ ಮುಖ್ಯ ಸುತ್ತಿಗೆ ಅರ್ಹತೆ ಗಳಿಸಲಿದ್ದಾರೆ. ಪುರುಷರ ವಿಭಾಗದಲ್ಲಿ 24 ಮಂದಿಗೆ ನೇರ ಅರ್ಹತೆ ಸಿಕ್ಕಿದೆ.
ಹೋದ ವರ್ಷ ಶೇಖರ್ ವೀರಸ್ವಾಮಿ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದರು. ಡಬಲ್ಸ್ ವಿಭಾಗದಲ್ಲಿ ಶೇಖರ್ ಮತ್ತು ಗೋಪಿನಾಥ್ ಚಾಂಪಿಯನ್ ಆಗಿದ್ದರು.
ಪ್ರತಿಮಾ ರಾವ್ ಮತ್ತು ಶೇಖರ್ ವೀರಸ್ವಾಮಿ ಅವರು ಈ ಬಾರಿ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್ ವಿಭಾಗಗಳಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ.