ಕನಕಪುರ: ತಾಲ್ಲೂಕಿನ ಸಂಗಮ್ ಬಳಿ ಗುರುವಾರ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ ಮಗುಚಿದ್ದು ಅದರಲ್ಲಿದ್ದ 17 ಜನರು
ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬೆಂಗಳೂರಿನ ಆವಲಹಳ್ಳಿ ಸ್ತ್ರೀ ಶಕ್ತಿ ಮಹಿಳಾ ಸಂಘಟನೆಯ ಸದಸ್ಯರಾದ ಸುನಿತಾ, ಪ್ರತಿಭಾ, ಚೆನ್ನಮ್ಮ, ನಳಿನಾ, ವಾಣಿ, ಇಂದ್ರ, ಲಿಲಿತಾ, ಅನಿತಾ, ವಸಂತ, ರಾಜಮ್ಮ, ಗೌರಮ್ಮ, ಚಿಕ್ಕಮ್ಮ, ಸುಶೀಲ, ಸುಮ, ಗಂಗಮ್ಮ, ಕಲಾ, ಜಯಮ್ಮ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಅವರು ಬೆಳಿಗ್ಗೆ ತಾಲ್ಲೂಕಿನ ಕಬ್ಬಾಳಮ್ಮ ದೇವಾಲಯದಲ್ಲಿ ಮೊದಲಿಗೆ ಪೂಜೆ ನೆರವೇರಿಸಿ ನಂತರ ಮುತ್ತತ್ತಿ ದೇವಾಲಯಕ್ಕೆ ಭೇಟಿ ಕೊಟ್ಟು ಅಲ್ಲಿಯೂ ಪೂಜೆ ಮುಗಿಸಿ ಸಂಗಮ ನೋಡಲೆಂದು ಹೊರಟಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಸಂಗಮ ಸಮೀಪದ ಮೊದಲ ತಿರುವು ಕುಂಟೆಕ್ರಾಸ್ನಲ್ಲಿ ಮಿನಿಬಸ್ ಉರುಳಿದೆ. ಒಳಗಿದ್ದ ಬಹುತೇಕರಿಗೆ ಕಾಲು, ಕೈ ಮುರಿದಿವೆ. ತಲೆಗೆ ಪೆಟ್ಟಾಗಿದೆ. ಅಪಘಾತವಾಗುತ್ತಿದ್ದ ರಸ್ತೆಯಲ್ಲಿ ಬರುತ್ತಿದ್ದ ಬೇರೆ ಪ್ರಯಾಣಿಕರು ಕೂಡಲೇ ಸಾತನೂರು ಪೊಲೀಸರಿಗೆ ವಿಷಯ ತಿಳಿಸಿದರು.
ಬಸ್ಸಿನಲ್ಲಿ ಗಾಯಗೊಂಡಿದ್ದವರನ್ನು ಸುರಕ್ಷಿತವಾಗಿ ಹೊರಗೆ ಕರೆತಂದು ‘108’ ಆಂಬುಲೆನ್ಸ್ ಮೂಲಕ ದೊಡ್ಡ ಆಲಹಳ್ಳಿ ಸರ್ಕಾರಿ ಆಸ್ಪತ್ರೆ, ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ಕಳಿಸಿಕೊಟ್ಟಿದ್ಧಾರೆ. ವೈದ್ಯರು ಗಂಭೀರವಾಗಿ ಗಾಯಗೊಂಡಿದ್ದವರನ್ನು ಬೆಂಗಳೂರಿನ ನಿಮ್ಹಾನ್ಸ್, ವಿಕ್ಟೋರಿಯಾ, ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿದ್ದಾರೆ.
ಮರುಕಳಿಸಿದ ಅಪಘಾತ
ಇಂದು ಅಪಘಾತಗೊಂಡಿರುವ ಸ್ಥಳದಲ್ಲೇ ಈ ಹಿಂದೆ ಎರಡು ಬಾರಿ ಬಸ್ ಮಗುಚಿ ಸಾವು ನೋವು ಸಂಭವಿಸಿದೆ. ಈ ಸ್ಥಳದಲ್ಲಿ ಇರುವ ಸಮಸ್ಯೆಯೊ ಅಥವಾ ಚಾಲಕರ ನಿರ್ಲಕ್ಷವೋ ಗೊತ್ತಾಗುತ್ತಿಲ್ಲ. ಆದರೆ, ಪ್ರಯಾಣಿಕರು ಪಾರಾಗುತ್ತಿದ್ದಾರೆ. ಮುಂದೆ ಇಂತಹ ಅಪಘಾತಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.