ನವದೆಹಲಿ: ಗಂಗಾನದಿ ದಡದಲ್ಲಿರುವ ಹರಿದ್ವಾರ, ರಿಷಿಕೇಶಗಳಂತ ಹಲವು ನಗರಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್ಜಿಟಿ) ಘೋಷಿಸಿದೆ.
ಎನ್ಜಿಟಿ ಮುಖ್ಯಸ್ಥ ನ್ಯಾ. ಸ್ವತಂತ್ರ ಕುಮಾರ್ ನೇತೃತ್ವದ ಪೀಠ ಉತ್ತರಕಾಶಿವರೆಗೂ ಪ್ಲಾಸ್ಟಿಕ್ ಚೀಲ, ಪ್ಲೇಟ್ಗಳು ಹಾಗೂ ಮತ್ತಿತರೆ ಪ್ಲಾಸ್ಟಿಕ್ ವಸ್ತುಗಳ ಮಾರಾಟ, ಉತ್ಪಾದನೆ ಮತ್ತು ಸಂಗ್ರಹಣೆಯನ್ನು ನಿಷೇಧಿಸಿದೆ.
ಪರಿಸರವಾದಿ ಎಮ್.ಸಿ. ಮೆಹ್ತಾ ಅವರ ಮನವಿಯ ವಿಚಾರಣೆ ನಡೆಸಿದ ಹಸಿರು ಪೀಠ ಈ ಆದೇಶ ಹೊರಡಿಸಿದೆ. ಆದೇಶ ಉಲ್ಲಂಘಿಸುವವರಿಗೆ ₹ 5 ಸಾವಿರ ದಂಡ ವಿಧಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಈ ಹಿಂದೆಯೂ ಇಂತಹ ಆದೇಶ ಹೊರಡಿಸಲಾಗಿತ್ತಾದರೂ ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಬಂದಿರಲಿಲ್ಲ. ನದಿ ತೀರ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆಯಿಂದಾಗಿ ಮಾಲಿನ್ಯ ಹೆಚ್ಚಳವಾಗುತ್ತಿದೆ.