ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ವಿಚ್ಛೇದನಕ್ಕಾಗಿ ಬಳಸುವ ‘ತ್ರಿವಳಿ ತಲಾಖ್’ ಪದ್ಧತಿಯನ್ನು ನಿಷೇಧಿಸುವ ಮತ್ತು ಅಸಿಂಧುಗೊಳಿಸುವ ಕರಡು ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಕಾನೂನು ಉಲ್ಲಂಘಿಸಿ ತ್ರಿವಳಿ ತಲಾಖ್ ನೀಡುವ ಗಂಡನಿಗೆ ಮೂರು ವರ್ಷ ಶಿಕ್ಷೆ ವಿಧಿಸುವ ಪ್ರಸ್ತಾವವೂ ಕರಡು ಮಸೂದೆಯಲ್ಲಿ ಇದೆ.
ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಅಂತರ ಸಚಿವಾಲಯ ಗುಂಪು ಕರಡು ಮಸೂದೆಯನ್ನು ಸಿದ್ಧಪಡಿಸಿದೆ. ಸಚಿವರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರವಿಶಂಕರ್ ಪ್ರಸಾದ್ ಮತ್ತು ಪಿ.ಪಿ. ಚೌಧರಿ ಗುಂಪಿನ ಇತರ ಸದಸ್ಯರು.
‘ಮದುವೆಗೆ ಸಂಬಂಧಿಸಿ ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆ ಮಸೂದೆ’ಯು ತ್ರಿವಳಿ ತಲಾಖ್ಗೆ ಮಾತ್ರ ಅನ್ವಯವಾಗುತ್ತದೆ. ತ್ರಿವಳಿ ತಲಾಖ್ಗೆ ಒಳಗಾದ ಮಹಿಳೆಯರು ನ್ಯಾಯಾಲಯಕ್ಕೆ ಹೋಗಿ ತನಗೆ ಮತ್ತು ತನ್ನ 18 ವರ್ಷದೊಳಗಿನ ಮಕ್ಕಳಿಗೆ ಜೀವನಾಂಶ ಪಡೆಯುವ ಅವಕಾಶ ಮಸೂದೆಯಲ್ಲಿ ಇದೆ.