ಬಸವಕಲ್ಯಾಣ: ಎಚ್.ಐ.ವಿ ಸೋಂಕು ಪೀಡಿತ ಮತ್ತು ನಿರ್ಗತಿಕ ಮಕ್ಕಳು ಹಾಗೂ ಮಹಿಳೆಯರೊಂದಿಗೆ ಕ್ರಿಸ್ ಮಸ್ ಹಬ್ಬ ಆಚರಣೆಗೆ ತಾಲ್ಲೂಕಿನ ಕೌಡಿಯಾಳದ ಕ್ರಿಸ್ತ್ ಆಶ್ರಮ ಚರ್ಚ್ ಸಜ್ಜುಗೊಂಡಿದೆ. 18 ವರ್ಷಗಳ ಹಿಂದೆ ಪಟ್ಟಣಕ್ಕೆ ಸಮೀಪದಲ್ಲಿರುವ 9ನೇ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಆರಂಭವಾದ ಈ ಚರ್ಚ್ ಜನಾಕರ್ಷಣೆಯ ಕೇಂದ್ರ ಮತ್ತು ಸೇವಾ ಸಂಸ್ಥೆಯಾಗಿ ಬೆಳೆದಿದೆ.
ಮೂರು ಎಕರೆ ಜಾಗದಲ್ಲಿ ಅರ್ಬಿಟ್ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಸ್ಪರ್ಶ ಕೇರ್ ಸೆಂಟರ್, ಮಹಿಳೆಯರ ಮತ್ತು ಮಕ್ಕಳ ಆಪ್ತ ಸಮಾಲೋಚನಾ ಕೇಂದ್ರ, ಅಂಗವಿಕಲರ ಸಂಘ, ಮಕ್ಕಳ ಸಹಾಯವಾಣಿ, ದೌರ್ಜನ್ಯ ತಡೆ ಮತ್ತು ಜಾಗೃತಿ ಕೇಂದ್ರ ಈ ಚರ್ಚ್ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಈ ಎಲ್ಲದರ ಮೇಲ್ವಿಚಾರಣೆಯನ್ನು ಚರ್ಚ್ ನ ಫಾದರ್ ಅವರೇ ನೋಡಿಕೊಳ್ಳುತ್ತಾರೆ. ಎಚ್.ಐ.ವಿ ಸೋಂಕು ಪೀಡಿತ ಮಕ್ಕಳ ಆರೈಕೆ ಮಾಡುವ ಜಿಲ್ಲೆಯಲ್ಲಿನ ಏಕೈಕ ಕೇಂದ್ರ ಇದಾಗಿದೆ.
‘ಇಲ್ಲಿ ಚರ್ಚ್ ಆರಂಭವಾದಾಗ ಅಷ್ಟೊಂದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ನಂತರದಲ್ಲಿ ಇದರ ಸೇವಾ ಕ್ಷೇತ್ರ ವಿಸ್ತರಣೆಯಾದಾಗ ಎಲ್ಲರೂ ಇದರ ಕಾರ್ಯವೈಖರಿಯನ್ನು ಕೊಂಡಾಡುವಂತಾಗಿದೆ. ಇಲ್ಲಿನ ಮಕ್ಕಳ ಆರೈಕೆ ಕೇಂದ್ರದಲ್ಲಿ ಪ್ರಸಕ್ತ ಸಾಲಿನಲ್ಲಿ ಎಚ್.ಐ.ವಿ ಸೋಂಕು ಪೀಡಿತ 32 ಮಕ್ಕಳಿದ್ದಾರೆ. ಆರ್ಬಿಟ್ ಸಂಸ್ಥೆಯಿಂದ ತಾಲ್ಲೂಕಿನ ವಿವಿಧೆಡೆ 60 ಮಹಿಳಾ ಸ್ವಸಹಾಯ ಗುಂಪುಗಳನ್ನು ರಚಿಸಿ ಅವರಿಗೆ ಸಾಲಸೌಲಭ್ಯ ಒದಗಿಸಲಾಗಿದೆ. ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆಗೆ ಪ್ರೋತ್ಸಾಹಿಸಲಾಗಿದೆ’ ಎಂದು ಫಾದರ್ ಸಿರಿಲ್ ಲೋಬೋ ತಿಳಿಸಿದ್ದಾರೆ.
‘ಇಷ್ಟೇಲ್ಲ ಇರುವುದರಿಂದ ಜನಸಂಪರ್ಕವೂ ಇಲ್ಲಿ ಹೆಚ್ಚಾಗಿದೆ. ಕ್ರಿಸ್ ಮಸ್ ಹಬ್ಬಕ್ಕೂ ಹೆಚ್ಚಿನ ಜನರು ಸೇರುತ್ತಾರೆ. ಡಿಸೆಂಬರ್ 24 ರಂದು ರಾತ್ರಿ ಯೇಸುವಿನ ಜನ್ಮದಿನಾಚರಣೆ ನಡೆಯುತ್ತದೆ.
ಅದಕ್ಕಾಗಿ ಚರ್ಚ್ ಆವರಣದಲ್ಲಿ ಗೋದಲಿ ಹಾಕಿ ಸಿಂಗರಿಸಲಾಗಿದೆ. ಒಳಗಡೆ ಹುಲ್ಲು ಹಾಸಿನ ಮೇಲೆ ಬಾಲ ಯೇಸುವಿನ ಗೊಂಬೆ ಇಡಲಾಗಿದೆ. ಅಲ್ಲಲ್ಲಿ ಇತರೆ ಗೊಂಬೆಗಳನ್ನು ಇಟ್ಟು ಗೋದಲಿಗೆ ನಕ್ಷತ್ರಾಕಾರದ ಆಕಾಶದೀಪಗಳನ್ನು ಕಟ್ಟಲಾಗಿದೆ’ ಎಂದರು.