ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಸಮೀಪ ಓಂಕಾರ್ ವಲಯದ ಅರಣ್ಯದ ಅಂಚಿನಲ್ಲಿ ಗ್ರಾಮಕ್ಕೆ ನುಗ್ಗಿದ್ದ ಆನೆ ಮರಿ ಕೊನೆಗೂ ತಾಯಿ ಮಡಿಸಲು ಸೇರಲು ಸಾಧ್ಯವಾಗಲಿಲ್ಲ.
ತೀವ್ರ ಜ್ವರದಿಂದ ಬಳಲುತ್ತಿದ್ದ ಮರಿ ಆನೆಯು ವೈದ್ಯರ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟಿತು. ವೈದ್ಯ ನಾಗರಾಜು ಚಿಕಿತ್ಸೆ ನೀಡುತ್ತಿದ್ದರು.
‘ತಾಯಿಯಿಂದ ಬೇರ್ಪಡುವ ಮೊದಲೇ ಜ್ವರ ಬಂದಿರುವ ಸಾಧ್ಯತೆ ಇದೆ. ಬಲಗಾಲಿಗೆ ಪೆಟ್ಟಾಗಿದ್ದು, ಟ್ರಂಚ್ಗೆ ಬಿದ್ದು ಗಾಯವಾಗಿರಬಹುದು. ಅರಣ್ಯದಂಚಿನ ಬೆಟ್ಟ ಕಡಿದಾಗಿದ್ದರಿಂದ ಗುಂಪಿನೊಂದಿಗೆ ತೆರಳಲು ಅದಕ್ಕೆ ಸಾಧ್ಯವಾಗಿಲ್ಲ’ ಎಂದು ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೆಲಕಾಲ ಚಿಕಿತ್ಸೆ ನೀಡಿ, ಗುಣಮುಖವಾದ ಬಳಿಕ ಮರಿಯನ್ನು ತಾಯಿಯೊಂದಿಗೆ ಸೇರಿಸುವ ಯೋಜನೆ ಹಾಕಿಕೊಂಡಿದ್ದೆವು. ಆದರೆ, ನಿತ್ರಾಣಗೊಂಡಿದ್ದು, ಚೇತರಿಸಿಕೊಳ್ಳದೆ ಮೃತಪಟ್ಟಿತು’ ಎಂದರು.
ಘಟನೆ ವಿವರ: ಮರಿಯೊಂದಿಗೆ ಎರಡು ಕಾಡಾನೆ ಸೋಮವಾರ ಸಂಜೆ ಕುರುಬರಹುಂಡಿ ಗ್ರಾಮದ ಅಂಚಿನಲ್ಲಿ ಕಾಣಿಸಿಕೊಂಡಿದ್ದವು. ಅದನ್ನು ಕಂಡ ಗ್ರಾಮಸ್ಥರು ಗದ್ದಲ ಎಬ್ಬಿಸಿದ್ದರು. ಇದರಿಂದ ಗಾಬರಿಗೊಂಡ ಆನೆಗಳು ಮರಿಯನ್ನು ಅಲ್ಲಿಯೇ ಬಿಟ್ಟು ತೆರಳಿದ್ದವು. ಜ್ವರ ಮತ್ತು ಕಾಲು ನೋವಿನಿಂದ ಬಳಲುತ್ತಿದ್ದು, ತಾಯಿ ಜೊತೆಗೆ ಹೋಗಲಾಗದೆ ಅಲ್ಲಿಯೇ ಉಳಿದುಕೊಂಡಿತು. ‘ಮರಿ ಬೇರ್ಪಟ್ಟ ಜಾಗಕ್ಕೆ ತಾಯಿ ಆನೆ ನಾಲ್ಕೈದು ಬಾರಿ ಬಂದು ನೋಡಿ ಹೋಗುತ್ತದೆ. ಮರಿ ಸಿಗದಿದ್ದಾಗ ತನ್ನ ಗುಂಪು ಸೇರಿಕೊಳ್ಳುತ್ತದೆ. ಅದು ಸಾರ್ವಜನಿಕರಿಗೆ ಯಾವುದೇ ತೊಂದರೆ ಮಾಡುವುದಿಲ್ಲ’ ಎಂದು ಆನೆ ತಜ್ಞ ಅಜಯ್ ದೇಸಾಯಿ ತಿಳಿಸಿದರು.