ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ಆತ್ಮಗೌರವದ ಪ್ರತೀಕ– 'ಕೋರೆಗಾಂವ್ ವಿಜಯಸ್ತಂಭ'

Last Updated 3 ಜನವರಿ 2018, 12:14 IST
ಅಕ್ಷರ ಗಾತ್ರ

ಪುಣೆ: 1818 ಜನವರಿ 1ರಂದು ನಡೆದ ಸಂಘರ್ಷದಲ್ಲಿ ಹೋರಾಡಿ ಮಡಿದ 22 ಮಹರ್ ಸೈನಿಕರ ನೆನಪಿಗಾಗಿ ಬ್ರಿಟಿಷರು ಕೋರೆಗಾಂವ್‌ನಲ್ಲಿ 65 ಅಡಿ ಎತ್ತರದ ವಿಜಯಸ್ತಂಭ ನಿರ್ಮಿಸಿದ್ದಾರೆ. ಪ್ರತಿ ವರ್ಷ ಜನವರಿ 1ರಂದು ‘ಕೋರೆಗಾಂವ್ ವಿಜಯೋತ್ಸವ’ ದಿನವಾಗಿ ಆಚರಿಸಲಾಗುತ್ತಿದೆ.

1927ರ ಜನವರಿ 1ರಂದು ಕೋರೆಗಾಂವ್‌ ಭೇಟಿ ನೀಡಿದ್ದ ಅಂಬೇಡ್ಕರ್, ಮಹರ್ ಯೋಧರ ಹೋರಾಟವನ್ನು ಜನರಿಗೆ ತಿಳಿಯುವಂತೆ ಮಾಡಿದ್ದರು. ಅಂಬೇಡ್ಕರ್‌ ತಾವು ಬದುಕಿರುವವರೆಗೂ ಪ್ರತಿ ವರ್ಷ ಜನವರಿಯಲ್ಲಿ ಕೋರೆಗಾಂವ್ ಸ್ಮಾರಕಕ್ಕೆ ಭೇಟಿ ನೀಡುತ್ತಿದ್ದರು.

ಅಸ್ಪೃಶ್ಯತೆಯ ವಿರುದ್ಧ ಬಂಡೆದ್ದ ಮಹರ್ ದಲಿತ ಯೋಧರು ಮಹಾರಾಷ್ಟ್ರದ ಪೇಶ್ವೆಗಳ ವಿರುದ್ಧ ಜಯ ಸಾಧಿಸಿದ ದಿನವು, ಶೋಷಿತರ ಆತ್ಮಗೌರವ ತಲೆಯೆತ್ತಿದ ದಿನವೆಂದೇ ಪ್ರಸಿದ್ಧ. ಭಾರತದ ಇತಿಹಾಸದಲ್ಲಿ ಈ ಅಧ್ಯಾಯ ನೆನಪಿನಲ್ಲಿ ಉಳಿಸಲು ಹಾಗೂ ಆತ್ಮಗೌರವಕ್ಕಾಗಿ ಹೋರಾಡಿದ ದಲಿತರ ಗೌರವಾರ್ಥ 2005ರಲ್ಲಿ ಭೀಮಾ–ಕೋರೆಗಾಂವ್‌ ರಣಸ್ತಂಭ ಸೇವಾ ಸಂಘ(ಬಿಕೆಆರ್‌ಎಸ್‌ಎಸ್‌) ಸ್ಥಾಪಿಸಲಾಗಿದೆ.

ಪ್ರತಿ ವರ್ಷ ಜನವರಿ 1ರಂದು ನಡೆಯುವ ವಿಜಯೋತ್ಸವದಲ್ಲಿ ಪ್ರಾರಂಭದಲ್ಲಿ ಕೆಲವು ಸಾವಿರ ಮಂದಿ ಪಾಲ್ಗೊಳ್ಳುತ್ತಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ತಿಳಿಸಿರುವಂತೆ, ಈ ವರ್ಷ 200ನೇ ವಾರ್ಷಿಕೋತ್ಸವದ ಅಂಗವಾಗಿ 3.5 ಲಕ್ಷ ಜನರು ಕೋರೆಗಾಂವ್‌ ವಿಜಯಸ್ತಂಭದ ಸ್ಥಳಕ್ಕೆ ಭೇಟಿ ನೀಡಿದ್ದರು.

ಕರ್ನಾಟಕ, ಗುಜರಾತ್‌ ಹಾಗೂ ಉತ್ತರ ಪ್ರದೇಶದಿಂದ ಅಧಿಕ ಸಂಖ್ಯೆಯಲ್ಲಿ ದಲಿತ ಸಮುದಾಯದವರು ಇಲ್ಲಿಗೆ ಭೇಟಿ ನೀಡಿ ಗೌರವ ಸಲ್ಲಿಸುತ್ತಾರೆ. ಮಹರ್ ರೆಜಿಮೆಂಟ್‌ನ ನಿವೃತ್ತ ಅಧಿಕಾರಿಗಳು ಪರಾಕ್ರಮದ ಪ್ರತೀಕವಾಗಿರುವ ಈ ಸ್ಥಳಕ್ಕೆ ಭೇಟಿ ನೀಡುವುದು ವಾಡಿಕೆ.

ದಲಿತ–ಮರಾಠರಲ್ಲಿ ಒಡಕು:
1740ರಲ್ಲಿ ಒಂದನೇ ಬಾಜಿ ರಾವ್ ನಿಧನದ ಬಳಿಕ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪೇಶ್ವೆಗಳು ಹಾಗೂ ದಲಿತರಾದ ಮಹರ್‌ ಜನರ ನಡುವಿನ ಸಂಬಂಧ ಹದಗೆಟ್ಟಿತು. ಎರಡನೇ ಬಾಜಿ ರಾವ್‌ ಆಡಳಿತದಲ್ಲಿ ಮಹರ್‌ ಸಮುದಾಯವನ್ನು ಕೀಳಾಗಿ ನಡೆಸಿಕೊಳ್ಳಲಾಗುತ್ತದೆ. ಪೇಶ್ವೆಗಳ ಸೇನೆಗೆ ತಮ್ಮನ್ನೂ ಸೇರಿಸಿಕೊಳ್ಳುವಂತೆ ಮಹರ್‌ ಜನರು ಮಾಡುವ ಬಿನ್ನಹವನ್ನು ತಿರಸ್ಕರಿಸುವ ಎರಡನೇ ಬಾಜಿ ರಾವ್‌, ಕೀಳು ಜಾತಿಯವರಾದ ನಿಮ್ಮನ್ನು ಸೇನೆಗೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ.

ಛತ್ರಪತಿ ಶಿವಾಜಿ ಮಹಾರಾಜ ಕಾಲದಿಂದಲೂ ಮರಾಠ ಸೇನೆಯಲ್ಲಿ ಹಾಗೂ ಪೇಶ್ವೆ ಪಡೆಯಲ್ಲಿ ಮಹರ್‌ ಜನರು ಭಾಗಿಯಾಗಿದ್ದಾರೆ. ಮೂರನೇ ಪಾಣಿಪತ್‌ ಕದನ ಮತ್ತು ಖರ್ದಾ ಕದನದಲ್ಲಿಯೂ ಮಹರ್‌ ಸಮುದಾಯ ಹೋರಾಟ ನಡೆಸಿರುವ ಬಗ್ಗೆ ಐತಿಹಾಸಿಕ ದಾಖಲೆಗಳು ಇರುವುದಾಗಿ ಇತಿಹಾಸಕಾರರು ಹೇಳುತ್ತಾರೆ.

1689ರಲ್ಲಿ ಔರಂಗಝೇಬ್‌ ಆದೇಶದಂತೆ ಶಿವಾಜಿ ಪುತ್ರ ಸಾಂಭಾಜಿಗೆ ಚಿತ್ರ ಹಿಂಸೆ ನೀಡಿ ಹತ್ಯೆ ಮಾಡಲಾಗಿರುತ್ತದೆ. ಆಗ ಸಾಂಭಾಜಿ ಅಂತ್ಯಕ್ರಿಯೆಯನ್ನು ಮಹರ್‌ ಸಮುದಾಯದ ಗೋವಿಂದ ಗಣಪತ್‌ ಗಾಯಕ್ವಾಡ್‌ ನೆರವೇರಿಸಿದ್ದರು ಎನ್ನಲಾಗುತ್ತದೆ.

</p><p><strong>ಭೀಮಾ ತೀರದ ಕ್ರಾಂತಿ:</strong><br/>&#13; ಆತ್ಮಗೌರವದ ಪ್ರಶ್ನೆಯಿಂದ ಬ್ರಿಟಿಷ್‌ ಸೇನೆಯೊಂದಿಗೆ ಸೇರುವ ಮಹರ್‌ ಜನರು 1818ರಲ್ಲಿ ಪೇಶ್ವೆ ಸೇನೆಯ ವಿರುದ್ಧ ಕಾದಾಡುತ್ತಾರೆ.</p><p>ಬ್ರಿಟಿಷ್ ಕ್ಯಾಫ್ಟನ್ ಎಫ್.ಎಫ್. ಸ್ಟಾಂಟನ್ ನೇತೃತ್ವದಲ್ಲಿ ಬಾಂಬೆ ರೆಜಿಮೆಂಟ್‌ನ 500 ಮಹರ್‌ ಸೈನಿಕರು, ಪೂನಾದ 250 ಅಶ್ವದಳ ಹಾಗೂ ಮದ್ರಾಸ್‌ನ 24 ಗನ್‌ಮೆನ್‌ಗಳು 1818ರ ಜನವರಿ 1ರಂದು 28 ಸಾವಿರ ಯೋಧ ಬಲದ ಬೃಹತ್‌ ಪೇಶ್ವೆ ಪಡೆಯ ವಿರುದ್ಧ ಹೋರಾಟ ನಡೆಸಿದರು.</p><p>20 ಸಾವಿರ ಅಶ್ವದಳ ಮತ್ತು 8,000 ಕಾಲಾಳುಗಳಿದ್ದ ಮಹಾರಾಷ್ಟ್ರ ಆಡಳಿತದ ಸೇನೆಯ 2000 ಯೋಧರು ಪ್ರಾರಂಭದಲ್ಲಿ ಕಣಕ್ಕಿಳಿದರು. ಪೇಶ್ವೆ ಯೋಧರ ಸಂಖ್ಯೆ ಹೆಚ್ಚಿಸಿ ಸೇನೆ ಬಲಪಡಿಸಿದರೂ 500 ಮಹರ್‌ ಸೈನಿಕರು ದಿಟ್ಟ ಹೋರಾಟದಿಂದ ಅವರನ್ನು ಧೂಳೀಪಟ ಮಾಡಿದರು. 600ಕ್ಕೂ ಹೆಚ್ಚು ಪೇಶ್ವೆ ಯೋಧರು ಬಲಿಯಾಗುತ್ತಿದ್ದಂತೆ ಆ ಸೇನೆ ರಣರಂಗದಿಂದ ಪಲಾಯನ ಮಾಡಿತು. ಈ ಯುದ್ಧದಲ್ಲಿ ನೂರಾರು ಬ್ರಿಟಿಷ್‌, ಮರಾಠ, ರಜಪೂತ ಸೇರಿ ಹಲವು ಸಮುದಾಯದ ಯೋಧರು ಮೃತಪಟ್ಟರು. ಇಲ್ಲಿ 22 ಮಹರ್ ಯೋಧರ ಹುತಾತ್ಮರಾದರು.</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT