ಬೆಂಗಳೂರು: ಗಾಯದ ಸಮಸ್ಯೆಯಿಂದಾಗಿ ಎಂಟು ತಿಂಗಳಿಂದ ಹಾಕಿ ಅಂಗಣದಿಂದ ದೂರ ಉಳಿದಿದ್ದ ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ ತಂಡಕ್ಕೆ ಮರಳಿದ್ದಾರೆ. ಒಟ್ಟು 33 ಆಟಗಾರರ ತಂಡದ ರಾಷ್ಟ್ರೀಯ ಶಿಬಿರ ಗುರುವಾರ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ(ಸಾಯ್) ಆರಂಭವಾಗಲಿದೆ.
ಕಳೆದ ವರ್ಷ ನಡೆದ ಸುಲ್ತಾನ್ ಅಜ್ಲಾನ್ ಷಾ ಕಪ್ ಟೂರ್ನಿಯ ಸಂದರ್ಭ ದಲ್ಲಿ ಶ್ರೀಜೇಶ್ ಅವರ ಹಿಂಗಾಲಿಗೆ ಗಾಯವಾಗಿತ್ತು. ನಂತರ ಮೊಣಕಾಲಿಗೂ ಗಾಯವಾಗಿತ್ತು. ಹೀಗಾಗಿ ಪ್ರಮುಖ ಟೂರ್ನಿಗಳಿಂದ ದೂರ ಉಳಿದಿದ್ದರು. ತರಬೇತಿ ಶಿಬಿರದಲ್ಲಿ ಶ್ರೀಜೇಶ್ ಅವರೊಂದಿಗೆ ಗೋಲ್ಕೀಪರ್ಗಳಾದ ಆಕಾಶ್ ಚಿಕ್ತೆ, ಸೂರಜ್ ಕರ್ಕೇರ ಮತ್ತು ಕೃಷ್ಣ ಬಿ.ಪಾಠಕ್ ಕೂಡ ಪಾಲ್ಗೊಳ್ಳಲಿದ್ದಾರೆ. ಪಾಠಕ್ 2016ರಲ್ಲಿ ಭಾರತ ತಂಡ ಜೂನಿಯರ್ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಭಾರತ ಹಾಕಿ ತಂಡ ಒಡಿಶಾದಲ್ಲಿ ನಡೆದ ವಿಶ್ವ ಹಾಕಿ ಲೀಗ್ ಫೈನಲ್ನಲ್ಲಿ ಕಂಚಿನ ಪದಕ ಗೆದ್ದು ಕಳೆದ ವರ್ಷದ ಅಭೀಯಾನಕ್ಕೆ ತೆರೆ ಎಳೆದಿತ್ತು.
ಸಂಜೀವ್ ಕ್ಸೆಸ್ಗೆ ಅವಕಾಶ: 2016ರಲ್ಲಿ ಏಷ್ಯಾ ಕಪ್ ಗೆದ್ದ ಭಾರತದ 18 ವರ್ಷದೊಳಗಿನವರ ತಂಡವನ್ನು ಮುನ್ನಡೆಸಿದ ನೀಲಂ ಸಂಜೀವ್ ಕ್ಸೆಸ್ ಇದೇ ಮೊದಲ ಬಾರಿ ಸೀನಿಯರ್ ತಂಡದ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಡಿಫೆಂಡರ್ಗಳಾದ ಸರ್ದಾರ್ ಸಿಂಗ್, ಹರ್ಮನ್ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ದಿಪ್ಸನ್ ಟರ್ಕಿ, ವರುಣ್ ಕುಮಾರ್, ರೂಪಿಂದರ್ ಪಾಲ್ ಸಿಂಗ್, ಬೀರೇಂದ್ರ ಲಾಕ್ರಾ, ಸುರೇಂದರ್ ಕುಮಾರ್ ಹಾಗೂ ಗುರಿಂದರ್ ಸಿಂಗ್ ಅವರೊಂದಿಗೆ ನೀಲಂ ಸ್ಥಾನ ಪಡೆದಿದ್ದಾರೆ.
ಮಿಡ್ಫೀಲ್ಡ್ ವಿಭಾಗದಲ್ಲಿ ಹೊಸ ಬರು ಯಾರೂ ಇಲ್ಲ. ಕರ್ನಾಟಕದ ಎಸ್.ಕೆ.ಉತ್ತಪ್ಪ ಅವರನ್ನು ಒಳಗೊಂಡಂತೆ ಒಂಬತ್ತು ಮಂದಿ ಈ ವಿಭಾಗದಿಂದ ತರ ಬೇತಿಗೆ ಆಯ್ಕೆಯಾಗಿದ್ದಾರೆ. ಫಾರ್ವರ್ಡ್ ವಿಭಾಗದಲ್ಲಿ ಯುವ ಆಟಗಾರ ಸುಮಿತ್ ಕುಮಾರ್ ಅವರಿಗೆ ಅವಕಾಶ ನೀಡಲಾಗಿದೆ. 2016ರಲ್ಲಿ ಜೂನಿಯರ್ ತಂಡದಲ್ಲಿ ಅವರು ಉತ್ತಮ ಸಾಧನೆ ಮಾಡಿದ್ದರು. ಈ ವಿಭಾಗದಲ್ಲಿ ಕರ್ನಾ ಟಕದ ಎಸ್.ವಿ.ಸುನಿಲ್ ಕೂಡ ಆಯ್ಕೆಯಾಗಿದ್ದಾರೆ.
‘ವಿಶ್ವ ಹಾಕಿ ಲೀಗ್ ಫೈನಲ್ ನಂತರ ತಂಡದ ಸಾಮರ್ಥ್ಯಾಭಿವೃದ್ಧಿಗೆ ಅಗತ್ಯವಾಗಿ ಬೇಕಾದ ಅಂಶಗಳು ಏನು ಎಂಬುದು ನನ್ನ ಗಮನಕ್ಕೆ ಬಂದಿದೆ. ಬಲಿಷ್ಠ ತಂಡಗಳನ್ನು ಎದುರಿಸುವುದು ಹೇಗೆ ಎಂಬುದರ ಕುರಿತು ಕೂಡ ಸ್ಪಷ್ಟ ಕಲ್ಪನೆ ಮೂಡಿದೆ. ಮುಂದಿನ ಟೂರ್ನಿ ಯಲ್ಲಿ ಈ ಕುರಿತ ತಂತ್ರವೇ ಪ್ರಮುಖ ವಿಷಯವಾಗಲಿದೆ’ ಎಂದು ಭಾರತದ ಕೊಚ್ ಶೋರ್ಡ್ ಮ್ಯಾರಿಜ್ ಹೇಳಿದರು.
ಭಾರತ ಈ ವರ್ಷದ ಅಭಿಯಾನ ವನ್ನು ನ್ಯೂಜಿಲೆಂಡ್ನಲ್ಲಿ ನಡೆಯಲಿರುವ ನಾಲ್ಕು ರಾಷ್ಟ್ರಗಳ ಆಹ್ವಾನಿತ ಟೂರ್ನಿಯೊಂದಿಗೆ ಆರಂಭಿಸಲಿದೆ. ಟೂರ್ನಿಯಲ್ಲಿ ಆತಿಥೇಯರು ಮಾತ್ರ ವಲ್ಲದೆ ಬೆಲ್ಜಿಯಂ ಮತ್ತು ಜಪಾನ್ ಕೂಡ ಕಣಕ್ಕೆ ಇಳಿಯಲಿದೆ.
ತರಬೇತಿಗೆ ಆಯ್ಕೆಯಾದ ಆಟಗಾರರು: ಗೋಲ್ಕೀಪರ್ಗಳು: ಪಿ.ಆರ್.ಶ್ರೀಜೇಶ್, ಆಕಾಶ್ ಅನಿಲ್ ಚಿಕ್ಟೆ, ಸೂರಜ್ ಕರ್ಕೇರ, ಕೃಷ್ಣ ಬಿ.ಪಾಠಕ್; ಡಿಫೆಂಡರ್ಗಳು: ಹರ್ಮನ್ ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ದಿಪ್ಸನ್ ಟರ್ಕಿ, ವರುಣ್ ಕುಮಾರ್, ರೂಪಿಂದರ್ ಪಾಲ್ ಸಿಂಗ್, ಬೀರೇಂದ್ರ ಲಾಕ್ರ, ಸುರೇಂದರ್ ಕುಮಾರ್, ಗುರಿಂದರ್ ಸಿಂಗ್, ನೀಲಂ ಸಂಜೀವ್ ಕ್ಸೆಸ್, ಸರ್ದಾರ್ ಸಿಂಗ್; ಮಿಡ್ಫೀಲ್ಡರ್ಗಳು: ಮನ್ಪ್ರೀತ್ ಸಿಂಗ್, ಚಿಂಗ್ಲೆಂಗ್ಸಾನ ಸಿಂಗ್, ಎಸ್.ಕೆ.ಉತ್ತಪ್ಪ, ಸುಮಿತ್, ಕೊತಾಜಿತ್ ಸಿಂಗ್, ಸತ್ಬೀರ್ ಸಿಂಗ್, ನೀಲಕಂಠ ಶರ್ಮಾ, ಸಿಮ್ರಾನ್ಜೀತ್ ಸಿಂಗ್, ಹರ್ಜೀತ್ ಸಿಂಗ್; ಫಾರ್ವರ್ಡ್: ಎಸ್.ವಿ.ಸುನಿಲ್, ಆಕಾಶ್ದೀಪ್ ಸಿಂಗ್, ಮನ್ದೀಪ್ ಸಿಂಗ್, ಲಲಿತ್ ಉಪಾಧ್ಯಾಯ, ಗುರ್ಜಂತ್ ಸಿಂಗ್, ರಮನ್ದೀಪ್ , ಅರ್ಮಾನ್ ಖುರೇಷಿ, ಅಫಾನ್ ಯೂಸುಫ್, ತಲ್ವಿಂದರ್ ಸಿಂಗ್ ಮತ್ತು ಸುಮಿತ್ ಕುಮಾರ್.
ಈ ವರ್ಷದ ಪ್ರಮುಖ ಟೂರ್ನಿಗಳು
* ಏಪ್ರಿಲ್ನಲ್ಲಿ ಗೋಲ್ಡ್ ಕೋಸ್ಟ್ನಲ್ಲಿ ಕಾಮ್ವೆಲ್ತ್ ಗೇಮ್ಸ್
* ಜುಲೈನಲ್ಲಿ ನೆದರ್ಲೆಂಡ್ಸ್ನಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ
* ಆಗಸ್ಟ್ನಲ್ಲಿ ಜಕಾರ್ತದಲ್ಲಿ ಏಷ್ಯನ್ ಗೇಮ್ಸ್
* ಅಕ್ಟೋಬರ್ನಲ್ಲಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿ
* ನವೆಂಬರ್ನಲ್ಲಿ ಭುವನೇಶ್ವರದಲ್ಲಿ ವಿಶ್ವಕಪ್ ಟೂರ್ನಿ
*
ದೇಶಿ ಪಂದ್ಯಗಳನ್ನು ಮಾತ್ರ ಆಡಿರುವ ಆಟಗಾರರ ಮೇಲೆ ಹೆಚ್ಚು ಗಮನ ನೀಡಲಾಗುವುದು. ನ್ಯೂಜಿಲೆಂಡ್ನಲ್ಲಿ ಆಡುವ ಎಂಟು ಪಂದ್ಯಗಳಿಗೆ ತಂಡವನ್ನು ಸಜ್ಜುಗೊಳಿಸುವುದು ಆದ್ಯತೆ.
–ಶೋರ್ಡ್ ಮ್ಯಾರಿಜ್,
ಭಾರತ ತಂಡದ ಕೋಚ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.