ಚಾಮರಾಜನಗರ: ಹವಾಮಾನ ವೈಪರೀತ್ಯದಿಂದ ಮಳೆ ಕ್ಷೀಣಿಸುತ್ತಿರುವು ದರಿಂದ ನೀರಿನ ಮಟ್ಟ ಕುಸಿಯುತ್ತಿದ್ದು, ಅಂತರ್ಜಲವನ್ನು ಉಳಿಸಲು ಪ್ರತಿಯೊಬ್ಬ ರಲ್ಲೂ ಅರಿವು ಮೂಡಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ ಸಲಹೆ ನೀಡಿದರು.
ತಾಲ್ಲೂಕಿನ ಹರದನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಇತ್ತೀಚೆಗೆ ಅಂತರ್ಜಲ ಸದ್ಬಳಕೆ, ಸಂರಕ್ಷಣೆ, ಗುಣಮಟ್ಟ, ಮಳೆ ನೀರಿನ ಸಂಗ್ರಹಣೆ, ಮರುಬಳಕೆ ಮತ್ತು ವಿಫಲ ಕೊಳವೆ ಬಾವಿಗಳಲ್ಲಿ ಚಿಕ್ಕಮಕ್ಕಳು ಬಿದ್ದು ಸಂಭವಿಸುವ ಅವಘಡ ನಿಯಂತ್ರಿಸುವ ಕುರಿತು ನಡೆದ ಜನಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಕಾಲಕ್ಕೆ ಮಳೆಯಾಗದೆ ಇರುವುದರಿಂದ ಅಂತರ್ಜಲದ ಮಟ್ಟ ನಿರಂತರವಾಗಿ ಕ್ಷೀಣಿಸುತ್ತಿದೆ. ಇದರಿಂದ ಕುಡಿಯುವ ನೀರಿನ ಅಲಭ್ಯತೆ ಉಂಟಾಗುತ್ತಿದೆ. ಅಂತರ್ಜಲ ಅಭಿವೃದ್ಧಿ ಕುರಿತು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವ ಹೊಣೆ ನಮ್ಮದಾಗಬೇಕು ಎಂದರು.
ಹರದನಹಳ್ಳಿ ಕೆರೆ ಮತ್ತು ಬಂಡಿ ಗೆರೆಗೆ ಚಿಕ್ಕಹೊಳೆ ಜಲಾಶಯದಿಂದ ಪೈಪ್ಲೈನ್ ಮೂಲಕ ನೀರನ್ನು ಹಾಯಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಬೇಕು. ಅಂತರ್ಜಲ ಮರುಪೂರಣದಿಂದ ನೀರಿನ ಮಟ್ಟ, ಅದರ ಗುಣಮಟ್ಟ ಕಾಪಾಡಿ ಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಮೈಸೂರಿನ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಭೂವಿಜ್ಞಾನಿ ಪ್ರಾಣೇಶ್ರಾವ್ ಮಾತನಾಡಿ, ಅಂತರ್ಜಲ ಪೂರಣಕ್ಕಿಂತ ಬಳಕೆ ಹೆಚ್ಚಾಗಿ ಅಸಮತೋಲನ ಸ್ಥಿತಿ ಉಂಟಾಗಿದೆ. ಇದನ್ನು ಸರಿಪಡಿಸಬೇಕಾದರೆ ಅಂತರ್ಜಲ ಕೃತಕ ಮರುಪೂರಣ ರಚನೆಗಳನ್ನು ನಿರ್ಮಿಸುವುದು ಅವಶ್ಯಕ ಎಂದು ತಿಳಿಸಿದರು.
ಭೂ ವಿಜ್ಞಾನಿಗಳಾದ ಎಚ್. ರಮೇಶ್, ಪಿ.ಎಸ್. ಶೋಭಾರಾಣಿ ಮಾತನಾಡಿದರು. ಹರದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬ ಶೆಟ್ಟಿ ಅಂತರ್ಜಲ ಕುರಿತ ಕೈಪಿಡಿ ಬಿಡುಗಡೆ ಗೊಳಿಸಿದರು.
ಶಿಬಿರದ ಅಂಗವಾಗಿ ವಿದ್ಯಾರ್ಥಿ ಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಮಹದೇವಶೆಟ್ಟಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಿಕ್ಕಮಣಿ, ಅಂತರ್ಜಲ ನಿರ್ದೇಶನಾಲಯ ಹೆಚ್ಚುವರಿ ನಿರ್ದೇಶಕಿ ಸಣ್ಣಬೋರಮ್ಮ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಕುಲಕರ್ಣಿ, ಅಂತರ್ಜಲ ನಿರ್ದೇಶನಾಲಯದ ಹಿರಿಯ ಭೂ ಭೌತ ವಿಜ್ಞಾನಿ ಜಯಣ್ಣ, ಮೈಸೂರು ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿ ಕೆ.ವಿ.ಆರ್. ಚೌದರಿ, ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಿಪತಿ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಯಸ್ವಾಮಿ, ಮುಖ್ಯಶಿಕ್ಷಕ ಜಯಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ವೈ. ಸೀಮಾ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.