ನವದೆಹಲಿ: ‘ಡಿಜಿಟಲ್ ಕರೆನ್ಸಿ ಗಳಿಗೆ (ಬಿಟ್ಕಾಯಿನ್) ದೇಶದಲ್ಲಿ ವಿನಿಮಯ ಮಾನ್ಯತೆ ಇಲ್ಲ’ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
‘ದೇಶದಲ್ಲಿ ಬಿಟ್ಕಾಯಿನ್ಗಳನ್ನು ವಿನಿಮಯ ಮಾಧ್ಯಮವಾಗಿ ಗುರುತಿಸಲಾಗುತ್ತಿಲ್ಲ. ಆದರೂ, ಸಾರ್ವಜನಿಕರಲ್ಲಿ ಮತ್ತು ಅಸಂಘಟಿತ ಮಾರುಕಟ್ಟೆಗಳಲ್ಲಿ ಕಾನೂನುಬಾಹಿರವಾಗಿ ಅದರ ಅಸ್ತಿತ್ವ ಕಂಡು ಬರುತ್ತಿದೆ’ ಎಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
‘ಅದೊಂದು ನಿಯಂತ್ರಣರಹಿತ ಡಿಜಿಜಲ್ ಹಣ. ಅಭಿವೃದ್ಧಿಪಡಿಸಿದವರೇ ಅದನ್ನು ನಿಯಂತ್ರಿಸುತ್ತಾರೆ. ಇಂತಹ ವಹಿವಾಟಿನಲ್ಲಿ ತೊಡಗಿಕೊಂಡವರು ಅವುಗಳನ್ನು ಸ್ವೀಕರಿಸುತ್ತಾರೆ. ದೇಶದಲ್ಲಿ ಬಿಟ್ಕಾಯಿನ್ ವಹಿವಾಟಿನ ಹಲವಾರು ಕೇಂದ್ರಗಳಿವೆ. ಈ ಕರೆನ್ಸಿಗಳಲ್ಲಿನ ಹೂಡಿಕೆ ಮತ್ತು ಅದರ ಮೊತ್ತದ ಕುರಿತು ವಿಶ್ವಾಸಾರ್ಹ ಮಾಹಿತಿ ಇಲ್ಲ.
‘ಅವುಗಳ ಬೆಲೆ ಸಂಪೂರ್ಣವಾಗಿ ಊಹಾತ್ಮಕವಾಗಿರುತ್ತದೆ. ಹೂಡಿಕೆದಾರರು ಭಾರಿ ನಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಕೇಂದ್ರ ಸರ್ಕಾರವಾಗಲಿ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಆಗಲಿ ಇವುಗಳ ವಹಿವಾಟಿಗೆ ಲೈಸನ್ಸ್ ನೀಡಿಲ್ಲ’ ಎಂದೂ ಜೇಟ್ಲಿ ಸ್ಪಷ್ಟಪಡಿಸಿದರು.