ಧರ್ಬಾ: ತಮ್ಮ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಅನುಮಾನದಿಂದ ಇಲ್ಲಿನ ಸರಪಂಚ್ ಅನ್ನು ನಕ್ಸಲರು ಹತ್ಯೆ ಮಾಡಿದ್ದಾರೆ. ಧರ್ಬಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಂದ್ರು ಹತ್ಯೆಯಾದವರು.
ನಕ್ಸಲರಿಂದ ಪ್ರಾಣ ಬೆದರಿಕೆ ಇದ್ದ ಕಾರಣ ಭದ್ರತಾ ಶಿಬಿರದಲ್ಲಿ ಉಳಿದುಕೊಳ್ಳುವಂತೆ ಪೊಲೀಸರು ನೀಡಿದ್ದ ಸಲಹೆಯನ್ನು ಪಂದ್ರು ನಿರಾಕರಿಸಿದ್ದ ಎನ್ನಲಾಗಿದೆ.
ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಬಸ್ತಾರ್ ಜಿಲ್ಲೆಯ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆರೀಫ್ ಶೇಖ್, ‘ಕೊಲೆಂಗ್ ಶಿಬಿರದಲ್ಲಿ ಉಳಿದುಕೊಳ್ಳುವಂತೆ ನೀಡಿದ್ದ ಸಲಹೆಯನ್ನು ಪಂದ್ರು ನಿರಾಕರಿಸಿದ್ದ. ಹೀಗಾಗಿ ನಕ್ಸಲರು ಕೊಲೆ ಮಾಡಿದ್ದಾರೆ’ ಎಂದು ಹೇಳಿದ್ದಾರೆ.
ಜಿಲ್ಲಾ ಮೀಸಲು ಪಡೆ(ಡಿಆರ್ಜಿ) ಕೊಲೆಂಗ್ ಶಿಬಿರದಿಂದ ವಾಪಸ್ ಆಗಿದ್ದು, ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್) ಜತೆ ಕಾರ್ಯ ನಿರ್ವಹಿಸಲಿದೆ. ಪೊಲೀಸರು ಹಾಗೂ ಭದ್ರತಾ ಪಡೆಗಳು ಜಂಟಿಯಾಗಿ ನಕ್ಸಲರ ವಿರುದ್ಧ ಕ್ಷಿಪ್ರ ಕಾರ್ಯಾಚರಣೆ ನಡೆಸಲಿವೆ ಎಂದಿದ್ದಾರೆ.