ವಿರಾಜಪೇಟೆ: ವಿವಿಧ ವಿನ್ಯಾಸದ ಚಿತ್ತಾರ...! ಕಣ್ಮನ ಸೆಳೆಯುವ ಬಗೆಬಗೆಯ ರೇಖಾ ಚಿತ್ರಗಳು! ಅಂಗೈನಲ್ಲಿ ಮೂಡಿದ ಸುಂದರ ಕಲಾತ್ಮಕತೆ ಅಪೂರ್ವ ವಿನ್ಯಾಸಗಳು...! ಈ ದೃಶ್ಯ ಕಂಡು ಬಂದಿದ್ದು ಪಟ್ಟಣದ ಸಂತ ಅನ್ನಮ್ಮ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ. ಕಾಲೇಜಿನ ಸ್ಟೂಡೆಂಟ್ ಆಕ್ಟಿವಿಟಿ ಕ್ಲಬ್ನಿಂದ ಈಚೆಗೆ ವಿದ್ಯಾರ್ಥಿಗಳಿಗೆ ಮೆಹಂದಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಮದುವೆ ಮುಂತಾದ ಶುಭ ಸಮಾರಂಭದ ಭಾಗವಾಗಿ ವಿಶೇಷವಾಗಿ ಹೆಣ್ಣು ಮಕ್ಕಳ ಅಂಗೈನ ತುಂಬಾ ಮೆಹಂದಿ ಆವರಿಸಿಕೊಂಡಿರುತ್ತಿದ್ದ ಕಾಲ ಒಂದಿತ್ತು. ಕಾಲ ವೇಗವಾಗಿ ಬದಲಾಗುತ್ತಿದ್ದರೂ ಇಂದು ಕೂಡ ಮೆಹಂದಿ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲದಿರುವುದು ವಿಶೇಷ.
ಇದು ಹೆಣ್ಣು ಮಕ್ಕಳಿಗೆ ಮೆಹಂದಿಯ ಕುರಿತಿರುವ ವ್ಯಾಮೋಹವನ್ನು ಸೂಚಿಸುತ್ತದೆ. ಕೆಲವು ಕಾರ್ಯಕ್ರಮಗಳಂತು ಮೆಹಂದಿಯಿಲ್ಲದೆ ಪರಿಪೂರ್ಣವಾಗದು ಎಂಬಂತಿರುವುದೇ, ಮಾನವನ ಬದುಕಿನೊಂದಿಗೆ ಮೆಹಂದಿ ಎಷ್ಟು ಹಾಸುಹೊಕ್ಕಾಗಿದೆ ಎಂಬುದನ್ನು ಸೂಚಿಸುತ್ತದೆ.
ನಮ್ಮ ಸಂಸ್ಕೃತಿಯ ಸೊಗಡನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಮೆಹಂದಿ ಸ್ಪರ್ಧೆಯನ್ನು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಬಾಲಕ ಬಾಲಕಿಯರೆಂಬ ಭೇದ ತೋರದೆ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಕೆಲವು ವಿದ್ಯಾರ್ಥಿಗಳು ಸಿದ್ದ ಮೆಹಂದಿಯನ್ನು ಅಂಗಡಿಯಿಂದ ಹಣ ತೆತ್ತು ತಂದಿದ್ದರೆ, ಮತ್ತೆ ಕೆಲವರು ತಾವೇ ಮನೆಯಲ್ಲಿ ತಯಾರಿಸಿಕೊಂಡು ಬಂದಿದ್ದರು. ಮುಂತಾದವುಗಳನ್ನು ಬಳಸಿ ಸೃಜನಾತ್ಮಕತೆಗೆ ಸಾಕ್ಷಿಯಾದರು.
ತಲಾ 2 ವಿದ್ಯಾರ್ಥಿಗಳನ್ನೊಳಗೊಂಡ 50 ತಂಡಗಳ ಸುಮಾರು 100 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ತಮ್ಮ ತಂಡದ ವಿದ್ಯಾರ್ಥಿಯ ಅಂಗೈನಲ್ಲಿ ತಮ್ಮ ಕಲ್ಪನೆಯ ಚಿತ್ತಾರವನ್ನು ಮೂಡಿಸಲು 30 ನಿಮಿಷಗಳ ಸಮಯಾವಕಾಶವನ್ನು ನಿಗದಿ ಮಾಡಲಾಗಿತ್ತು. ಸ್ಪರ್ಧೆಯಲ್ಲಿ ವಿನ್ಯಾಸ ಹಾಗೂ ಸೃಜನಾತ್ಮಕತೆಗೆ ಪ್ರಮುಖ ಸ್ಥಾನವನ್ನು ನೀಡಲಾಗಿತ್ತು.
ಸ್ಪರ್ಧೆಯಲ್ಲಿ ಶಫಿದಾ ಹಾಗೂ ಪ್ರಿಯ ಮೊದಲ ಸ್ಥಾನ ಗಳಿಸಿದರೆ, ಸೂಫಿಯಾನ ಹಾಗೂ ಲಿಪಿಕ ಎರಡನೇ ಸ್ಥಾನ ಮತ್ತು ದೇಚಮ್ಮ ಹಾಗೂ ದರ್ಶಿನಿ ಮೂರನೆ ಸ್ಥಾನ ಗಳಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಉಪನ್ಯಾಸಕರಾದ ಕೃಷ್ಣರಾಜ್, ರೆನ್ನಿ ಟ್ರೆಸಾ, ರಶ್ಮಿ, ಕ್ರಿಸ್ಟಿನಾ ಹಾಗೂ ಅಶ್ವಿನಿ ಕಾರ್ಯನಿರ್ವಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.