ಬೆಂಗಳೂರು: ಸಮಿತಿಯಲ್ಲಿ ಮಹಿಳಾ ಸದಸ್ಯರ ನೇಮಕಕ್ಕೆ ರಾಜ್ಯ ಅಲ್ಪಸಂಖ್ಯಾತ ಆಯೋಗಕ್ಕೆ ಮನವಿ ಮಾಡುತ್ತೇವೆ. ಆಸಕ್ತಿ ಇರುವವರು ದಾಖಲೆ ಸಮೇತ ಸಮಿತಿಗೆ ಜನವರಿ 25ರೊಳಗೆ ಅಹವಾಲು ಸಲ್ಲಿಸಲು ಅವಕಾಶವಿದೆ ಎಂದು ತಜ್ಞರ ಸಮಿತಿ ಅಧಕ್ಷ ನಿವೃತ್ತ ನ್ಯಾ.ನಾಗಮೋಹನ್ ದಾಸ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ವೈಜ್ಞಾನಿಕವಾಗಿ, ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸುತ್ತೇವೆ. ಪ್ರತ್ಯೆಕ ಧರ್ಮ ಮತ್ತು ಅಲ್ಪಸಂಖ್ಯಾತರ ಸ್ಥಾನಮಾನ ಎರಡನ್ನೂ ನಾವು ಪರಾಮರ್ಶಿಸುತ್ತೇವೆ. ಎಲ್ಲರ ಅಹವಾಲು ಮನವಿಗಳಿಗೂ ಪ್ರಾಮುಖ್ಯತೆ ಇದ್ದು, ಯಾವುದನ್ನೂ ಕಡೆಗಣಿಸುವುದಿಲ್ಲ. ನಮ್ಮ ವರದಿಗೆ ಪರ–ವಿರೋಧ ಅಭಿಪ್ರಾಯ ವ್ಯಕ್ತಪಡಿಸಬಹುದು’ ಎಂದರು.
‘ಜನವರಿ 25ರೊಳಗೆ ಆಸಕ್ತಿ ಇರುವವರು ಸಮಿತಿಗೆ ತಮ್ಮ ಅಹವಾಲು ಸಲ್ಲಿಸಲು ಅವಕಾಶವಿದೆ. ಸಂಘ–ಸಂಸ್ಥೆಗಳು, ಮಠಾಧೀಶರು, ಇತರ ವ್ಯಕ್ತಿಗಳು ಸೇರಿ ಈಗಾಗಲೇ 36 ಅಹವಾಲು ಬಂದಿವೆ.
ನಮ್ಮ ಕೆಲಸವನ್ನು ನಾವು ಕಾನೂನಾತ್ಮಕವಾಗಿ ಮಾಡುತ್ತೇವೆ. ಕೋರ್ಟಿನಲ್ಲಿ ವ್ಯಾಜ್ಯ ಇರುವುದರಿಂದ ಕೋರ್ಟ್ ವಿಚಾರಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಎಲ್ಲ ಅಹವಾಲುಗಳನ್ನು ಪರಾಮರ್ಶಿಸಲಾಗುತ್ತದೆ.
ಜ.27ಕ್ಕೆ ತಜ್ಞರ ಸಮಿತಿ ಎರಡನೇ ಸಭೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಮಾಹಿತಿ ನೀಡಿದರು.
* ಸರ್ಕಾರ ಕೊಟ್ಟಿರುವ 4 ವಾರದ ಕಾಲಾವಕಾಶದಲ್ಲಿ ನಮ್ಮ ಕೆಲಸ ಮುಗಿಸಲು ಸಾಧ್ಯವಿಲ್ಲ. ಸಮಿತಿಗೆ ಕನಿಷ್ಠ 6 ತಿಂಗಳು ಸಮಯ ಒದಗಿಸಲು ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ. –ನಿವೃತ್ತ ನ್ಯಾ.ನಾಗಮೋಹನ್ ದಾಸ್, ತಜ್ಞರ ಸಮಿತಿ ಅಧ್ಯಕ್ಷ