ಹಾಸನ: ‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ ಪಂಥಾಹ್ವಾನ ನೀಡಿದರು.
‘ಸಿದ್ದರಾಮಯ್ಯ ಮಾತೆತ್ತಿದ್ದರೆ ಗುಂಡ್ಲುಪೇಟೆ, ನಂಜನಗೂಡು ಉಪ ಉಪಚುನಾವಣೆ ಪ್ರಸ್ತಾಪಿಸುತ್ತಾರೆ. ಅದು ಸಾರ್ವತ್ರಿಕ ಚುನಾವಣೆಯಲ್ಲ, ಅಧಿಕಾರ ದುರ್ಬಳಕೆ ಮಾಡಿಕೊಂಡು ಗೆದ್ದಿದ್ದು ಎಂಬುದು ಎಲ್ಲರಿಗೂ ಗೊತ್ತು. ಸಾರ್ವತ್ರಿಕ ಚುನಾವಣೆಯಲ್ಲಿ ಆ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ತೋರಿಸಲಿ’ ಎಂದು ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
‘ಎರಡು ಕ್ಷೇತ್ರಗಳಲ್ಲಿ ಎಚ್.ಡಿ.ದೇವೇಗೌಡರು ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೆ ತಪ್ಪು ಮಾಡಿದರು. ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಇದರಿಂದಾಗಿ ಸಿದ್ದರಾಮಯ್ಯ ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಯಡಿಯೂರಪ್ಪ, ಕುಮಾರಸ್ವಾಮಿ ಮತ್ತು ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನಾವು ಎಲ್ಲೂ ಲಘುವಾಗಿ ಮಾತನಾಡಿಲ್ಲ. ಸಿ.ಎಂ ಸ್ಥಾನಕ್ಕೆ ಗೌರವ ನೀಡಿ. ಇಲ್ಲವಾದರೆ ಮುಂದಿನ ಪೀಳಿಗೆಯವರು ಶಾಪ ಹಾಕುತ್ತಾರೆ’ ಎಂದು ಎಚ್ಚರಿಸಿದರು.
ನಾಲಿಗೆ ಮತ್ತು ನಡವಳಿಕೆಗಳೇ ಸಿದ್ದರಾಮಯ್ಯ ಅವರಿಗೆ ದೊಡ್ಡ ಶತ್ರು. ಸಾಧನ ಸಮಾವೇಶಗಳಲ್ಲಿ ಯಾವುದೇ ಕ್ಷೇತ್ರ, ತಾಲ್ಲೂಕು ಅಥವಾ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡದೇ ಯಡಿಯೂರಪ್ಪ ಹಾಗೂ ಜೆಡಿಎಸ್ ನಾಯಕರನ್ನು ಟೀಕೆ ಮಾಡುತ್ತಾ ರಾಜ್ಯದ ಬೊಕ್ಕಸ ಖಾಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
‘ಆರ್ಎಸ್ಎಸ್, ಬಜರಂಗದಳ ದವರೇ ಉಗ್ರಗಾಮಿಗಳು’ ಎಂಬ ಸಿದ್ದರಾಮಯ್ಯ ಟೀಕೆಗೆ ತಿರುಗೇಟು ನೀಡಿದ ಅವರು, ಹೈಕಮಾಂಡ್ ಓಲೈಕೆ ಮಾಡಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಉಗ್ರಗಾಮಿಗಳು ಎಂಬುದಕ್ಕೆ ಪುರಾವೆ ಇದ್ದರೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದರು.
ಜವಾಬ್ದಾರಿಯುತ ಸ್ಥಾನ ದಲ್ಲಿದ್ದುಕೊಂಡು ಈ ರೀತಿಯ ಹೇಳಿಕೆ ನೀಡುವ ಮೊದಲು ಯೋಚಿಸಬೇಕು. ಬಳಸುತ್ತಿರುವ ಪದ ಬಳಕೆ ಮತ್ತು ಆರೋಪ ನೋಡಿದರೆ ಯಾವ ರಾಜ್ಯದಲ್ಲಿದ್ದೇವೆಂಬ ಅನುಮಾನ ಮೂಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣೆ ಇನ್ನು ಮೂರು ತಿಂಗಳಿದ್ದು, ಯಾವುದೇ ಭಾಗ್ಯಗಳು ಇಲ್ಲಿ ಪರಿಣಾಮ ಬೀರುವುದಿಲ್ಲ. ಇದೇ ತಿಂಗಳು 28ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. 30 ರ್ಯಾಲಿ ಆಯೋಜಿಸಲಾಗುವುದು. ಜಿಲ್ಲೆಯಲ್ಲಿ 4 ಸ್ಥಾನಗಳನ್ನು ಬಿಜೆಪಿ ಗೆದ್ದಿರುವ ಉದಾಹರಣೆ ಇದೆ. ಈ ಬಾರಿ ಖಾತೆ ತೆರೆಯಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಘಟಕ
ಅಧ್ಯಕ್ಷ ಯೋಗಾ ರಮೇಶ್, ಉಪಾಧ್ಯಕ್ಷ ಪ್ರೀತಂ ಜೆ.ಗೌಡ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ರೇಣುಕುಮಾರ್, ಪರ್ವತಯ್ಯ, ಗ್ರಾಮಾಂತರ ಮಂಡಲ ಅಧ್ಯಕ್ಷ ಅಗಿಲೆ ಯೋಗೀಶ್, ಶೋಭನ್ ಬಾಬು, ನವಲೆ ಅಣ್ಣಪ್ಪ
8 ಕಡೆ ಸ್ಪರ್ಧಿಸಲು ಅವಕಾಶ
ರಾಜ್ಯದಲ್ಲಿ 8 ಕಡೆ ಸ್ಪರ್ಧಿಸಲು ಅವಕಾಶವಿದೆ. ಷೇರುಮಾರುಕಟ್ಟೆಯಲ್ಲಿ ನನಗೂ ಉತ್ತಮ ಬೆಲೆ ಇದೆ. ಜಿಲ್ಲೆಯ ಅರಸೀಕೆರೆ ಕ್ಷೇತ್ರದಲ್ಲಿ ಜನ ಬೆಂಬಲ ಇದೆ. ಹೈಕಮಾಂಡ್ ಸೂಚಿಸಿದರೆ ಅರಸೀಕೆರೆ ಸೇರಿದಂತೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದ. ಜಿಲ್ಲೆಯ ಏಳು ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಹಾಕಲಾಗುವುದು ಎಂದು ಸ್ಪಷ್ಟಪಡಿಸಿದರು.
* *
ಯಡಿಯೂರಪ್ಪ ಹಾವೇರಿಯಿಂದ ಹೆಲಿಕಾಪ್ಟರ್ನಲ್ಲಿ ಸುತ್ತೂರು ಮಠಕ್ಕೆ ಕರೆದುಕೊಂಡು ಬಾರದಿದ್ದರೆ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಮೂಸು ನೋಡುತ್ತಿರಲಿಲ್ಲ
ವಿ.ಸೋಮಣ್ಣ, ವಿಧಾನ ಪರಿಷತ್ ಸದಸ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.