ಬೆಂಗಳೂರು: ‘ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯಾಗಿ ಘೋಷಿಸಬೇಕು’ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರನ್ನು ಎರಡನೇ ಆಡಳಿತ ಕೇಂದ್ರವಾಗಿ ಘೋಷಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ದೇಶಪಾಂಡೆ ಮನವಿ ಮಾಡಿದ್ದಾರೆ.
‘ಎರಡನೇ ರಾಜಧಾನಿಯಾಗಿ ಘೋಷಿಸಿದರೆ ದಕ್ಷಿಣದ ರಾಜ್ಯಗಳಿಗೆ ಅನುಕೂಲವಾಗಲಿದೆ. ಸುಪ್ರೀಂಕೋರ್ಟ್ನ ಪೀಠ ಸ್ಥಾಪಿಸಬಹುದು, ಕೇಂದ್ರ ಲೋಕಸೇವಾ ಆಯೋಗದ ಶಾಖೆ ಆರಂಭಿಸಬಹುದು, ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಸಬಹುದು. ಬೇರೆ ಬೇರೆ ದೇಶಗಳ ವೀಸಾ ಕಚೇರಿಗಳನ್ನೂ ಇಲ್ಲಿ ಆರಂಭಿಸಬಹುದು’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಭಾರತದ ಎಲ್ಲ ಭಾಷೆಗಳನ್ನೂ ಆಡುವ ಜನರು ಇಲ್ಲಿ ನೆಲೆಸಿದ್ದಾರೆ. ತಾಂತ್ರಿಕ, ವೈದ್ಯಕೀಯ, ಏರೊಸ್ಪೇಸ್, ಮಾಹಿತಿ ತಂತ್ರಜ್ಞಾನ, ಸಂಗೀತ, ಸಾಹಿತ್ಯ, ಕಲೆ ಹೀಗೆ ಎಲ್ಲ ಕ್ಷೇತ್ರಗಳ ಸಾಧಕರು ಇಲ್ಲಿದ್ದಾರೆ. ಎರಡನೇ ರಾಜಧಾನಿಯಾಗಲು ಇದಕ್ಕಿಂತ ಅರ್ಹತೆ ಪಡೆದಿರುವ ನಗರ ಬೇರೊಂದಿಲ್ಲ ಎಂದು ಅವರು ತಿಳಿಸಿದ್ದಾರೆ.