ನವದೆಹಲಿ : ಗುಜರಾತ್ ಮೂಲದ ಔಷಧ ಕಂಪನಿ ಜತೆ ಸೇರಿ ಬ್ಯಾಂಕಿಗೆ ₹5 ಸಾವಿರ ಕೋಟಿ ವಂಚನೆ ಎಸಗಿದ ಆರೋಪದ ಮೇಲೆ ಆಂಧ್ರಬ್ಯಾಂಕಿನ ಮಾಜಿ ನಿರ್ದೇಶಕ ಅನೂಪ್ ಪ್ರಕಾಶ್ ಗಾರ್ಗ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನವೆಂಬರ್ನಲ್ಲಿ ದೆಹಲಿ ಉದ್ಯಮಿ ಗಗನ್ ಧವನ್ ಅವರನ್ನು ಬಂಧಿಸಲಾಗಿತ್ತು. ‘ಹಣ ಅಕ್ರಮ ವರ್ಗಾವಣೆ ಕಾಯ್ದೆ ಅಡಿ ಗಾರ್ಗ್ ಅವರನ್ನು ಬಂಧಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೂಡ ಎಫ್ಐಆರ್ ದಾಖಲಿಸಿದೆ.
2008ರಿಂದ 2009ರ ಅವಧಿಯಲ್ಲಿ ಗಾರ್ಗ್ ಅವರು ಆಂಧ್ರ ಬ್ಯಾಂಕ್ ನಿರ್ದೇಶಕರಾಗಿದ್ದ ವೇಳೆ ಸಂಡೇಸಾರಾ ಸಹೋದರರಿಗೆ ₹1.52 ಕೋಟಿ ಮೊತ್ತವನ್ನು ನಗದು ಮೂಲಕ ಪಾವತಿಸಿದ್ದರು. 2011ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮನೆಮೇಲೆ ದಾಳಿ ನಡೆಸಿದ ವೇಳೆ ಸಿಕ್ಕ ಡೈರಿಯಲ್ಲಿ ಈ ಮಾಹಿತಿ ಇತ್ತು.
ಇದಲ್ಲದೇ, ಸಂಡೇಸಾರಾ ಸಹೋದರರಿಗೆ ಸೇರಿದ ಬೇನಾಮಿ ಕಂಪನಿಗಳಿಗೆ ಗಾರ್ಗ್ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ₹5ಸಾವಿರ ಕೋಟಿ ಅಕ್ರಮವಾಗಿ ಸಾಲ ನೀಡಿರುವುದು ತನಿಖೆ ವೇಳೆ ಬಯಲಾಗಿತ್ತು. ನಕಲಿ ಕಂಪನಿಗಳನ್ನು ಸೃಷ್ಟಿಸಿದ್ದ ಇವರು ಸಾಲಮರು ಪಾವತಿಸದೇ ವಂಚಿಸಿದ್ದರು. 2016ರಲ್ಲಿ ಪ್ರಕರಣ ದಾಖಲಾಗಿತ್ತು.