ಪ್ರತಿಭಟನಾ ಸ್ಥಳದಿಂದ ಕುಮಾರಕೃಪಾ ರಸ್ತೆಯತ್ತ ಮೆರವಣಿಗೆ ಮೂಲಕ ಹೊರಟಿದ್ದ ಪ್ರತಿಭಟನಾಕಾರರನ್ನು ಮೌರ್ಯ ವೃತ್ತದಲ್ಲಿ ಪೊಲೀಸರು ತಡೆದು ನಿಲ್ಲಿಸಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ತಳ್ಳಾಟವೂ ಉಂಟಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಮಾಹಿತಿ ಪಡೆದು ಪ್ರತಿಭಟನಾ ಸ್ಥಳಕ್ಕೆ ಬಂದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಪ್ರತಿಭಟನಾಕಾರರ ಜತೆ ಸಂಧಾನ ನಡೆಸಿದರು. ಈ ವೇಳೆ ಮುಖ್ಯಮಂತ್ರಿ ಪರ ಮಾತನಾಡಿದ ಸಚಿವರನ್ನು ತರಾಟೆಗೆ ತೆಗೆದುಕೊಂಡ ಸಮಿತಿಯ ಪದಾಧಿಕಾರಿಗಳು, ‘ಇದು ಸರ್ಕಾರದ ಸಾಧನಾ ಸಮಾವೇಶ ಅಲ್ಲ’ ಎಂದು ಟೀಕಿಸಿದರು.