ಬೆಂಗಳೂರು: ಕಬೀರ ಆಶ್ರಮದ ವತಿಯಿಂದ ಹಮ್ಮಿಕೊಂಡಿದ್ದ 100 ದಿನಗಳ ಉಚಿತ ತರಗತಿ ಕಾರ್ಯಕ್ರಮದಲ್ಲಿ ಸಂಭಾವನೆ ಪಡೆಯದೆಯೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಏಳು ಶಿಕ್ಷಕರನ್ನು ಭಾನುವಾರ ಸನ್ಮಾನಿಸಲಾಯಿತು.
2016–17ನೇ ಸಾಲಿನಲ್ಲಿ ತರಬೇತಿ ಪಡೆದು ಹೆಚ್ಚು ಅಂಕ ಗಳಿಸಿದ ಏಳು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ತರಗತಿಗಳ ಸಮಾರೋಪದಲ್ಲಿ ಮಾತನಾಡಿದ ಆಶ್ರಮದ ಅಧ್ಯಕ್ಷ ಟಿ.ಪ್ರಭಾಕರ್, ‘32 ವರ್ಷಗಳಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಮುಂದಿನವರ್ಷದಿಂದ ಪಿ.ಯು.ಸಿ ವಿದ್ಯಾರ್ಥಿಗಳಿಗೂ ತರಬೇತಿ ನೀಡುವ ಚಿಂತನೆ ಇದೆ. ಸಿ.ಇ.ಟಿ ತರಗತಿಯನ್ನೂ ಉಚಿತವಾಗಿ ನಡೆಸುತ್ತೇವೆ’ ಎಂದರು.
ಆಸ್ಪತ್ರೆಗಳು, ರಸ್ತೆಗಳು ಅಭಿವೃದ್ಧಿಯಾಗುತ್ತಿವೆ. ಆದರೆ, ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಸ್ವಾತಂತ್ರ ಪಡೆದು 70 ವರ್ಷ ಕಳೆದರೂ ಯಾವ ಸರ್ಕಾರಗಳೂ ಶಾಲೆಗಳ ಅಭಿವೃದ್ಧಿ ಕಡೆ ಗಮನಹರಿಸಲೇ ಇಲ್ಲ ಎಂದು ಹೆಬ್ಬಾಳ ಕ್ಷೇತ್ರದ ಶಾಸಕ ವೈ.ಎ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.
‘ಸರ್ಕಾರಿ ಶಾಲೆಗಳನ್ನು ಈಗಲೂ ಅಭಿವೃದ್ಧಿಪಡಿಸದಿದ್ದರೆ ದೇವರೂ ನಮ್ಮನ್ನು ಕ್ಷಮಿಸುವುದಿಲ್ಲ’ ಎಂದರು.
ವಿಶೇಷ ತರಗತಿಗಳಲ್ಲಿ ಹೆಚ್ಚುವರಿ ಬೋಧನೆ ಒದಗಿಸಿದ ಬಳಿಕವೂ ಅನೇಕ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಅಂತಹವರನ್ನು ಗುರುತಿಸಿ ತರಬೇತಿ ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಸಲಹೆ ನೀಡಿದರು