ಕಲಬುರ್ಗಿ: ಉತ್ತಮ ಆಟವಾಡಿದ ಕರ್ನಾಟಕದ ಪವನ್ ಅಲಂಕಾರ್ ಮತ್ತು ಎಸ್.ಸುಜಲ್ ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಬ್ ಜೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ 15 ವರ್ಷದೊಳಗಿನವರ ಬಾಲಕರ ಸಿಂಗಲ್ಸ್ನಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದರು.
ಪವನ್ ಅಲಂಕಾರ್ 15–8, 15–10ರಲ್ಲಿ ಮಧ್ಯಪ್ರದೇಶದ ಅಂಗದ್ ಮಚ್ಚಲ್ ಎದುರು, ಎಸ್. ಸುಜಲ್ 15–7, 15–10ರಲ್ಲಿ ಮಹಾರಾಷ್ಟ್ರದ ಪ್ರಜ್ವಲ್ ಸೋನವಾನೆ ವಿರುದ್ಧ ಜಯಿಸಿದರು.
ಅದೇ ರೀತಿ ಲವ ಟಿ.ವಡಕಲ್ 15–13, 11–15, 21–20ರಲ್ಲಿ ಆಂಧ್ರಪ್ರದೇಶದ ನಾಗ ಮಣಿಕಂಠ ಗಾದೆ ಎದುರು ಅಮೋಘ ಜಯ ಸಾಧಿಸಿದರು. ಎಚ್.ವಿ.ಸಂತೃಪ್ತ್ 15–9, 15–5ರಿಂದ ಪುದುಚೆರಿಯ ಜಿ.ವಿಶ್ವೇಶ್ವರನ್ ಎದುರು, ತುಷಾರ್ ಸುವೀರ್ ಹರಿಯಾಣದ ಗಗನ್ ವಿರುದ್ಧ 16–14, 11–15, 15–11ರಲ್ಲಿ ಗೆದ್ದರು.
ಬಾಲಕಿಯರ ಸಿಂಗಲ್ಸ್ನಲ್ಲಿ ಎ.ನೈಸಾ ಕಾರ್ಯಪ್ಪ ತೆಲಂಗಾಣದ ಡಿ.ವಿ.ಶ್ರುತಿ ಎದುರು 15–10, 8–15, 15–11ರಲ್ಲಿ ಗೆದ್ದು ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟರು.
13 ವರ್ಷದೊಳಗಿನವರ ಬಾಲಕರ ಸಿಂಗಲ್ಸ್ನ ಎರಡನೇ ಸುತ್ತಿನಲ್ಲಿ ರಾಜ್ಯದ ಆರ್.ದರ್ಶೀಲ್ ಸೂರ್ಯಗೌಡ ಅವರು 15–13, 15–11ರಲ್ಲಿ ಕೇರಳದ ಪಾರ್ಥಿಪ್ ಯಶ್ ಗೆ ಸೋಲುಣಿಸಿದರು. ಆರ್.ರಕ್ಷಿತ್ ಸೂರ್ಯಗೌಡ 15–9, 15–13ರಲ್ಲಿ ತೆಲಂಗಾಣದ ದಿವ್ಯೇಶ್ ಜೈನ್ ಅವರನ್ನು ಮಣಿಸಿದರು.